ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಹೃದಯದ ಶಸ್ತ್ರಚಿಕಿತ್ಸೆಗೆ  ಒಳಗಾಗುತ್ತಿದ್ದಾರೆ. ಶನಿವಾರ ಹೃದಯದ ಟಿಶ್ಯೂ ವಾಲ್ವ್​ ರಿಪ್ಲೇಸ್​ ಮೆಂಟ್​ ಆಪರೇಷನ್​ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಹೆಚ್​ಡಿಕೆ ಬೆಂಗಳೂರಿನ ಜಯದೇವ ಹೃದ್ರೋಗ ಅಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಬೆಂಗಳೂರು (ಸೆ.20): ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಶನಿವಾರ ಹೃದಯದ ಟಿಶ್ಯೂ ವಾಲ್ವ್​ ರಿಪ್ಲೇಸ್​ ಮೆಂಟ್​ ಆಪರೇಷನ್​ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಹೆಚ್​ಡಿಕೆ ಬೆಂಗಳೂರಿನ ಜಯದೇವ ಹೃದ್ರೋಗ ಅಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2007ರಲ್ಲಿ ಹೃದಯದ ಟಿಶ್ಯೂ ವಾಲ್ವ್ ಆಪರೇಷನ್​ಗೆ ಒಳಗಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹತ್ತು ವರ್ಷಗಳ ಬಳಿಕ ಮತ್ತೊಮ್ಮೆ ಅದೇ ಆಪರೇಷನ್​ಗೆ ಒಳಗಾಗಲಿದ್ದಾರೆ. ನಾಳೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಲಿರುವ ಕುಮಾರಸ್ವಾಮಿ, ಶನಿವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಹತ್ತು ವರ್ಷಗಳ ಹಿಂದೆ ಕುಮಾರಸ್ವಾಮಿಯವರಿಗೆ ಟಿಶ್ಯೂ ವಾಲ್ವ್​ ಅಳವಡಿಸಲಾಗಿತ್ತು. ಟಿಶ್ಯೂ ವಾಲ್ವ್​ನ ಅವಧಿ 10 ವರ್ಷಗಳ ಕಾಲ ಮಾತ್ರ ಇರುವುದರಿಂದ ಈಗ ಮತ್ತೊಮ್ಮೆ ಟಿಶ್ಯೂ ವಾಲ್ವ್​ ರಿಪ್ಲೇಸ್​ಮೆಂಟ್ ಮಾಡಲಾಗುತ್ತಿದೆ.

ಇತ್ತೀಚೆಗೆ ಇಸ್ರೇಲ್​ ಪ್ರವಾಸ ಕೈಗೊಂಡಿದ್ದ ವೇಳೆ ಕುಮಾರಸ್ವಾಮಿಯವರಿಗೆ ಏಕಾಏಕಿ ತೂಕ ಹೆಚ್ಚಾಗಿ ಆರೋಗ್ಯ ಸಮಸ್ಯೆ ಬಿಗಡಾಯಿಸಿತ್ತು. ಇಸ್ರೇಲ್​ನಲ್ಲೇ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ಇಸ್ರೇಲ್​ನಲ್ಲಿ ಆಸ್ಪತ್ರೆಗೆ ದಾಖಲಾಗದೇ ಬೆಂಗಳೂರಿಗೆ ವಾಪಸಾಗಿದ್ದ ಕುಮಾರಸ್ವಾಮಿ ಇಂಜೆಕ್ಷನ್​ ಪಡೆದು ಕೊಂಚ ಸುಧಾರಿಸಿಕೊಂಡಿದ್ದರು. ಇದೀಗ ಹೃದಯದ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ನಾಳೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ಕುಮಾರಸ್ವಾಮಿಯವರಿಗೆ ವೈದ್ಯರು ಸೂಚಿಸಿದ್ದಾರೆ. ಆದರೆ ಹದಿನೈದು ದಿನಗಳ ಕಾಲ ವಿಶ್ರಾಂತಿ ಪಡೆದು ಚುನಾವಣೆಯ ದೃಷ್ಟಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಲು ಹೆಚ್​​ಡಿಕೆ ಚಿಂತಿಸಿದ್ದಾರೆ ಎನ್ನಲಾಗಿದೆ.