ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಚನ್ನಪಟ್ಟಣ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

Add Asianetnews Kannada as a Preferred SourcegooglePreferred

ರಾಮನಗರ- ಚನ್ನಪಟ್ಟಣ ನನಗೆ ಎರಡು ಕಣ್ಣುಗಳು ಇದ್ದಂತೆ. ಎರಡರಲ್ಲಿ ಒಂದಿಲ್ಲದಿದ್ದರೂ ಅಂಧನಾಗುತ್ತೇನೆ. ನಾನು ನಿಮ್ಮ ಮಡಿಲಿನಲ್ಲಿದ್ದೇನೆ. ನೀವು ಹಾಲನ್ನಾದರೂ ನೀಡಿ, ವಿಷವನ್ನಾದರೂ ಕುಡಿಸಿ ಎಂದು ಮಂಗಳವಾರ ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ವಿಕಾಸಪರ್ವ ಸಮಾವೇಶದಲ್ಲಿ ಭಾವುಕರಾಗಿ ಅವರು ನುಡಿದರು.

ರಾಮನಗರ-ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿದ್ದು ನನ್ನನ್ನು ಉಳಿಸಿಕೊಂಡು, ಪಕ್ಷ ಬೆಳೆಸಿದರೆ ನಿಮ್ಮ ಮನೆಯ ಕಷ್ಟಗಳಿಗೆ ಪರಿಹಾರ ಕೊಡಿಸುವ ಜವಾಬ್ದಾರಿ ನನ್ನದು ಎಂದು ಅವರು ಹೇಳಿದರು.

ವಿಧಾನಸಭಾ ಚುನಾವಣೆ ನನ್ನ ಪಾಲಿಗೆ ಅಗ್ನಿ ಪರೀಕ್ಷೆಯಾಗಿದ್ದು, 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಿ ನನ್ನ ತಂದೆಯ ಪಾಲಿಗೆ ಉಡುಗೊರೆ ನೀಡಲು ಹೊರಟಿರುವುದಾಗಿ ತಿಳಿಸಿದರು.

ನನ್ನ ಆರೋಗ್ಯ ಏನಾಗಿದೆ ಎಂಬುದು ಗೊತ್ತು. ವೈದ್ಯರ ಸಲಹೆಯನ್ನು ತಿರಸ್ಕರಿಸಿ ಅಗ್ನಿ ಪರೀಕ್ಷೆ ಎದುರಿಸಲು ಹೊರಟಿದ್ದೇನೆ ಎಂದರು. ನಾನು 113 ಸ್ಥಾನಗಳ ಗೆಲವಿನ ಗುರಿ ಹೊಂದಿದ್ದೇನೆ. ಪಕ್ಷದ ಅಭ್ಯರ್ಥಿಗಳು ಮತ್ತು ಮುಖಂಡರು ಸರಿಯಾಗಿ ಕೆಲಸ ಮಾಡಿದರೆ 140 ಸ್ಥಾನಗಳಲ್ಲಿಯೂ ಗೆಲವು ಸಾಧಿಸಬಹುದು ಎಂದು ಹೇಳಿದರು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಸುಭದ್ರವಾಗಿದ್ದು ಮೈಸೂರು ಜಿಲ್ಲೆಯಲ್ಲಿ 11 ಕ್ಷೇತ್ರದಲ್ಲಿ 8 -9 ಸ್ಥಾನ, ಮಂಡ್ಯದಲ್ಲಿ ಏಳು ಸ್ಥಾನ , ತುಮಕೂರು 11 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲು ಪೂರಕ ವಾತಾವರಣವಿದೆ. ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಯ ಜನರು ಜೆಡಿಎಸ್‌ ಪರ ಒಲವು ಹೊಂದಿದ್ದಾರೆ ಎಂದು ತಿಳಿಸಿದರು.