ಹುಬ್ಬಳ್ಳಿಯಲ್ಲಿ ರೇವಣ್ಣ: ಏನೆಲ್ಲಾ ಪ್ರಶ್ನೆ, ಎಷ್ಟೆಲ್ಲಾ ಉತ್ತರ?
ಪೂರ್ಣ ಬಜೆಟ್ ಅಥವಾ ಪೂರಕ ಬಜೆಟ್ ಸಲಹೆ ನೀಡಲು ಸಿದ್ದ
ಹುಬ್ಬಳ್ಳಿಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿಕೆ
ಸೂಪರ್ ಸಿಎಂ ಎಂದು ಪುಕ್ಕಟೆ ಪ್ರಚಾರ ಸಿಗುತ್ತಿದೆ.
ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ.
ಕಾಂಗ್ರೆಸ್ ಅಧ್ಯಕ್ಷರಿಗೆ ಬಹಿರಂಗವಾಗಿ ಹೇಳಿದ್ದೇನೆ.
ಡಿ.ಕೆ. ಶಿವಕುಮಾರ ಮತ್ತು ನಾನು ಚೆನ್ನಾಗಿದ್ದೀವಿ.
ಉನ್ನತ ಶಿಕ್ಷಣಕ್ಕೆ ಹೊರಟ್ಟಿ ಕೊಡುಗೆ ಅಪಾರ
ಹುಬ್ಬಳ್ಳಿ(ಜೂ.17): ಪೂರ್ಣ ಬಜೆಟ್ ಅಥವಾ ಪೂರಕ ಬಜೆಟ್ ಬಗ್ಗೆ ತಮ್ಮ ಸಲಹೆ ಕೇಳಿದರೆ ನೀಡಲು ಸಿದ್ದ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಜೆಟ್ ಕುರಿತು ತಮ್ಮದೇ ಆದ ಯೋಜನೆ ಹೊಂದಿರುವುದಾಗಿ ತಿಳಿಸಿದರು.
ತಮ್ಮನ್ನು ಸೂಪರ್ ಸಿಎಂ ಎನ್ನುವ ಮೂಲಕ ಪುಕ್ಕಟೆ ಪ್ರಚಾರ ನೀಡಲಾಗುತ್ತಿದೆ ಎಂದ ರೇವಣ್ಣ, ತಾವು ಕೇವಲ ಲೋಕೋಪಯೋಗಿ ಇಲಾಖೆಯ ಕೆಲಸ ಮಾತ್ರ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಸಮ್ಮಿಶ್ರ ಸರ್ಕಾರದ ಭವಿಷ್ಯದ ಕುರಿತು ಮಾತನಾಡಿದ ರೇವಣ್ಣ, ಈ ಸರ್ಕಾರ ಸಂಪೂಣರ್ಣ 5 ವರ್ಷಗಳ ಕಾಲ ಇರಲಿದ್ದು ಯಾರೂ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.
ಇನ್ನು ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, ತಮ್ಮಿಂದ ಈ ರೀತಿಯ ಯಾವುದೇ ಹಸ್ತಕ್ಷೇಪ ನಡೆದಿಲ್ಲ ಎಂಧು ಹೇಳಿದರು. ಡಿಕೆಶಿ ಮತ್ತು ತಮ್ಮ ನಡುವೆ ಜಗಳ ತಂದಿಡಲು ಕೆಲವರು ಈ ರೀತಿಯ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದೂ ಅವರು ಹರಿಹಾಯ್ದರು.
ಬಸವರಾಜ್ ಹೊರಟ್ಟಿ ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದು, ಉನ್ನತ ಶಿಕ್ಷಣಕ್ಕೆ ಅವರ ಕೊಡುಗೆ ದೊಡ್ಡದಿದೆ. ಅಲ್ಲದೇ ಯಾವುದೇ ಖಾತೆ ನೀಡಿದರೂ ಅವರು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ದೇವೆಗೌಡ ಮತ್ತು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡುತ್ತೇನೆ ಎದು ರೇವಣ್ಣ ಸ್ಪಷ್ಟಪಡಿಸಿದರು.
ಇದೇ ವೇಳೆ ರೋಹಿಣಿ ಸಿಂಧೂ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸುವ ಕುರಿತು ಸಿಎಂ ಕುಮಾರಸ್ವಾಮಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ರೇವಣ್ಣ ಸ್ಪಷ್ಟಪಡಿಸಿದರು.