ಡಿಕೆಶಿ ನೋಡೋಕೆ ಓಡೋಡಿ ಹೋದವ್ರು ವಿಶ್ವನಾಥರನ್ನ ಮರೆತುಬಿಟ್ರು..!
ಕಾಂಗ್ರೆಸ್ಸಿನ ಸಚಿವ ಡಿ.ಕೆ.ಶಿವಕುಮಾರ್ ಅವರು ನಿಶಕ್ತಿಯಿಂದಾಗಿ ಆಸ್ಪತ್ರೆಗೆ ದಾಖಲಾದಾಗ ಓಡೋಡಿ ಹೋಗಿ ಆರೋಗ್ಯ ವಿಚಾರಿಸಿದ್ದವರು, ತಮ್ಮ ಪಕ್ಷದ ಅಧ್ಯಕ್ಷ ಆಸ್ಪತ್ರೆಯಲ್ಲಿದ್ರೂ ಕ್ಯಾರೆ ಎನ್ನದ ದಳಪತಿಗಳು.
ಬೆಂಗಳೂರು, [ಅ.23]: ಕಿಡ್ನಿ ಸ್ಟೋನ್ ಸಮಸ್ಯೆಯಿಂದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಒಂದು ವಾರ ಕಾಲ ಆಸ್ಪತ್ರೆಗೆ ದಾಖಲಾದರೂ ಅವರ ಪಕ್ಷದ ವರಿಷ್ಠ ನಾಯಕರು ಭೇಟಿ ನೀಡದಿರುವುದು ಇದೀಗ ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಾಗಲಿ ಅಥವಾ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ ಆಸ್ಪತ್ರೆಯತ್ತ ಸುಳಿಯಲೇ ಇಲ್ಲ. ಇದೇ ದೇವೇಗೌಡ, ರೇವಣ್ಣ ಮತ್ತು ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿನ ಸಚಿವ ಡಿ.ಕೆ.ಶಿವಕುಮಾರ್ ಅವರು ನಿಶಕ್ತಿಯಿಂದಾಗಿ ಆಸ್ಪತ್ರೆಗೆ ದಾಖಲಾದಾಗ ಓಡೋಡಿ ಹೋಗಿ ಆರೋಗ್ಯ ವಿಚಾರಿಸಿದ್ದರು.
ಹಾಗೆ ನೋಡಿದರೆ ಶಿವಕುಮಾರ್ ಅವರ ಅಂದಿನ ಅನಾರೋಗ್ಯಕ್ಕೆ ಹೋಲಿಸಿದರೆ ವಿಶ್ವನಾಥ್ ಅವರ ಅನಾರೋಗ್ಯ ಪರಿಸ್ಥಿತಿ ತೀವ್ರವಾಗಿತ್ತು. ಆದರೂ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ಆರೋಗ್ಯ ವಿಚಾರಿಸಲು ಹೋಗಿಲ್ಲ.
ಇದ್ರಿಂದ ಸ್ವತಃ ವಿಶ್ವನಾಥ್ ಅವರ ಬೆಂಬಲಿಗರೂ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ವಿಶ್ವನಾಥ್ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಕೆಲವೇ ಕ್ಷಣಗಳ ಮೊದಲು ಪಕ್ಷದ ಉಪಾಧ್ಯಕ್ಷ ಶರವಣ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು
ಒಟ್ಟಿನಲ್ಲಿ ಸಮ್ಮಿಶ್ರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಿನಿಂದ ಸ್ವಪಕ್ಷದ ನಾಯಕರುಗಳಿಗಿಂತ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಮೇಲೆ ದೇವೇಗೌಡ ಅವರಿಗೆ ಪ್ರೀತಿ ಜಾಸ್ತಿ ಆಗಿದಂತೂ ಸತ್ಯ.