30 ಸಾವಿರದ ಪಿಜ್ಜಾ ತಿನ್ನುವವರಿಗೆ 12 ಸಾವಿರದ ಉದ್ಯೋಗ ಕಾಣದು!
ಉದ್ಯೋಗ ಕಲ್ಪಿಸುವ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಣ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವರೊಬ್ಬರು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ[ಜೂ.27] 30 ಸಾವಿರ ರೂ. ಮೌಲ್ಯದ ಪಿಜ್ಜಾ ತಿನ್ನುವವರಿಗೆ 12 ಸಾವಿರ ರೂ. ವೇತನದ ಉದ್ಯೋಗ ಕಣ್ಣಿಗೆ ಕಾಣದು ಎಂದು ಕೇಂದ್ರದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಗಿರಿರಾಜ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಗುಜರಾತ್ನ ಸಬರಮತಿಯಲ್ಲಿ ನಡೆದ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಮೇಳದದಲ್ಲಿ ಮಾತನಾಡಿ, ದೇಶದಲ್ಲಿ ಉದ್ಯೋಗವಕಾಶ ನಿರ್ಮಾಣವಾಗುತ್ತಿಲ್ಲ ಎಂದು ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪ ಮಾಡುತ್ತಿರುವುದಕ್ಕೆ ಖಾರವಾದ ಪ್ರತಿಕ್ರಿಯೆ ನೀಡಿದರು.
ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಆರೋಪ ಮಾಡುತ್ತಿರುವವರಿಗೆ ಕೇಂದ್ರ ಸರಕಾರ 4 ಕೋಟಿ ಉದ್ಯೋಗ ಸೃಷ್ಟಿಸಿರುವುದನ್ನು ಜಾಹೀರು ಮಾಡುತ್ತೇನೆ. ಮುದ್ರಾ ಯೋಜನೆಯಡಿ ಸಾಲ ನೀಡುವುದರ ಜತೆಗೆ ಉದ್ಯೋಗ ಕಲ್ಪಿಸಲಾಗಿದೆ. ಆದರೆ ಇದು ಕಾಂಗ್ರೆಸ್ ಕಣ್ಣಿಗೆ ಕಾಣುತ್ತಿಲ್ಲ ಎಂದರು.
ಯುಪಿಎ ಅವಧಿಯಲ್ಲಿ 11 ಲಕ್ಷ ಜನ ಉದ್ಯೋಗ ಪಡೆದುಕೊಂಡಿದ್ದರು. ಅದು ಬರೋಬ್ಬರಿ 10 ವರ್ಷದ ಅವಧಿಯಲ್ಲಿ. ಆದರೆ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ 16 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ದೇಶದಲ್ಲಿ ಕೌಶಲ್ಯದ ಕೊರತೆಯಿದ್ದು ಅದಕ್ಕೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.