ಬೇಳೂರು ಗೋಪಾಲಕೃಷ್ಣ ವಿರುದ್ಧ ಶಾಸಕ ಹಾಲಪ್ಪ ವಾಗ್ದಾಳಿ ನಡೆಸಿದ್ದಾರೆ. ಅವರ ವಿರುದ್ಧ ಗರಂ ಆಗಿರುವ ಹಾಲಪ್ಪ ಹಳೇ ಪ್ರಕರಣವನ್ನು ಕೆದಕಿ ಹಾಕುವ ಅಗತ್ಯವೇನಿತ್ತು ಎಂದು ಹೇಳಿದ್ದಾರೆ. 

ಶಿವಮೊಗ್ಗ : ಹಳೇ ಪ್ರಕರಣವೊಂದನ್ನು ನ್ಯಾಯಾಲಯವೇ ಖುಲಾಸೆಗೊಳಿಸಿರುವಾಗ ಬೇಳೂರು ಗೋಪಾಲಕೃಷ್ಣ ಮತ್ತೆ ಕೆದಕಿ ಪ್ರಮಾಣಕ್ಕೆ ಕರೆಯುವ ಅಗತ್ಯವೇನಿತ್ತು? ಸಿಗಂಧೂರು ಕ್ಷೇತ್ರಕ್ಕೆ ಗೋಪಾಲಕೃಷ್ಣ ಬರಲಿ. ಅವರಿಗೆ ಅವರಿಗೆ ಕೊಡುವ ಪಟ್ಟಿಯಲ್ಲಿರುವ ಹೆಸರಿನವರಿಗೂ ತಮಗೂ ಯಾವುದೇ ಸಂಬಂಧ ಇಲ್ಲವೆಂದು ಅವರು ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಶಾಸಕ ಹರತಾಳು ಹಾಲಪ್ಪ ತಿರುಗೇಟು ನೀಡಿದ್ದಾರೆ. ಇದೇವೇಳೆ ಬೇಳೂರು ಗೋಪಾಲಕೃಷ್ಣ ಮಾನಸಿಕ ನ್ಯಾಯಾಲಯದಲ್ಲಿ ನನ್ನನ್ನು ಆರೋಪಿ ಎಂದು ಹೇಳಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವೆ ಎಂದು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಳೂರು ಗೋಪಾಲಕೃಷ್ಣ ಅವರು, ಜನರ ಗಮನ ಸೆಳೆಯುವ ಸಲುವಾಗಿ ಹಳೇ ಪ್ರಕರಣ ಕೆದಕುವ ಯತ್ನ ಮಾಡಿದ್ದಾರೆ. ಸಾಕ್ಷ್ಯಗಳನ್ನು ಮರೆಮಾಚಿ ನಿರ್ದೋಷಿಯಾಗಿದ್ದಾರೆ. ಆದರೂ ಮಾನಸಿಕ ನ್ಯಾಯಾಲಯದಲ್ಲಿ ಅವರು ಅಪರಾಧಿಯಾಗಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಇದನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುವೆ ಎಂದು ಹೇಳಿದರು.

ಗೋಪಾಲಕೃಷ್ಣ ಅವರೇನು ಸರಿಯಾಗಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಪತ್ನಿ ಸಮೇತ ನಾನೂ ಸಿಗಂದೂರಿಗೆ ಬರುತ್ತೇನೆ. ಗೋಪಾಲಕೃಷ್ಣ ಕೂಡ ಅಲ್ಲಿಗೆ ಬರಲಿ. ಅವರಿಗೆ ನಾನೊಂದು ಪಟ್ಟಿಕೊಡುತ್ತೇನೆ. ಆ ಪಟ್ಟಿಯಲ್ಲಿರುವ ಹೆಸರಿನವರಿಗೂ ತಮಗೂ ಯಾವುದೇ ಸಂಬಂಧ ಇಲ್ಲವೆಂದು ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡುತ್ತೇನೆ. ಇದಕ್ಕೆ ನಮ್ಮಿಬ್ಬರ ಪತ್ನ್ನಿಯರೇ ಸಾಕ್ಷಿ ಎಂದು ಹೇಳಿದರು.

ಇದೇವೇಳೆ ಅವರಷ್ಟುಬುದ್ಧಿವಂತ, ಮೇಧಾವಿ ನಾನಲ್ಲ. ಅವರು ದೇಶದಲ್ಲಿ ಮಾನಸಿಕ ನ್ಯಾಯಾಲಯ ಎಲ್ಲಿದೆ ಎಂದು ಮೊದಲು ತಿಳಿಸಬೇಕು ಎಂದು ವ್ಯಂಗ್ಯವಾಡಿದರು. ಬೇಳೂರು ಗೋಪಾಲಕೃಷ್ಣ ನನ್ನ ಸವಾಲನ್ನು ಅವರು ಸ್ವೀಕರಿಸದಿದ್ದರೆ ಮುಂದಿನ ದಿನಗಳಲ್ಲಿ ಅವರ ಯಾವುದೇ ಆರೋಪ, ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಾಗಿ ಅವರಷ್ಟೇ ಮೇದಾವಿ, ಬುದ್ಧಿವಂತರಿಂದ ಉತ್ತರ ಕೊಡಿಸುತ್ತೇನೆ. ಅದಕ್ಕೆ ಅವರು ಸಿದ್ಧರಾಗಲಿ ಎಂದರು.