ಹಂಗೆ, ಹಿಂಗೆ ಅಂತೆಲ್ಲಾ ಅಂತಿದ್ದ ಶಾಸಕ ಬಿಜೆಪಿಗೆ ಗುಡ್ ಬೈ!
ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಪಕ್ಷ ತೊರೆದ ಜ್ಞಾನ್ ದೇವ್ ಅಹುಜಾ! ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ! ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕ ಅಹುಜಾ ಪಕ್ಷಕ್ಕೆ ಗುಡ್ ಬೈ! ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಜ್ಞಾನ್ ದೇವ್ ಅಹುಜಾ! ಅವಮಾನ ಮಾಡಿದ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ತಾರಾ ಅಹುಜಾ?
ಜೈಪುರ(ನ.19): ಮುಂಬರುವ ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದರಿಂದ ಮುನಿಸಿಕೊಂಡಿರುವ ರಾಮ್ಗರ್ ಶಾಸಕ ಜ್ಞಾನ್ ದೇವ್ ಅಹುಜಾ, ಪಕ್ಷ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಅಹುಜಾ ಜೊತೆ ಟಿಕೆಟ್ ನಿರಾಕರಿಸಲ್ಪಟ್ಟ ಅನೇಕ ಶಾಸಕರು ಮತ್ತು ರಾಜ್ಯ ಸಚಿವರೊಬ್ಬರು ಪಕ್ಷ ತೊರೆದಿದ್ದಾರೆ. ಕಳೆದ ಭಾನುವಾರ ಭಾರತೀಯ ಜನತಾ ಪಾರ್ಟಿ ಡಿಸೆಂಬರ್ 7ರಂದು ನಡೆಯುವ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಅಹುಜಾ ಸೇರಿದಂತೆ ಇತರ ಪ್ರಮುಖ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು.
ಇದರಿಂದ ಕುಪಿತಗೊಂಡಿರುವ ಜ್ಞಾನ ದೇವ್ ಅಹುಜಾ, ಮಾಹಿತಿಯೂ ನೀಡದೇ ಟಿಕೆಟ್ ನಿರಾಕರಿಸಿರುವುದು ತಮಗೆ ಮಾಡಿದ ಅವಮಾನ ಎಂದು ಹರಿಹಾಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಗನೇರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಅಹುಜಾ ಘೋಷಿಸಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಲಾಲ್ ಸೈನಿ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿರುವ ಅಹುಜಾ, ತಮಗೆ ಮೋಸ ಮಾಡಿದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಭಾರೀ ಬೆಲೆ ತೆರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.