ಜಿಎಸ್ಟಿ ಜಾರಿಯಲ್ಲಿ ನ್ಯೂನತೆ, ಸರ್ಕಾರಕ್ಕೆ ಲಾಭ, ಜನರಿಗೆ ನಷ್ಟ: ಕಾಂಗ್ರೆಸ್ ಟೀಕೆ
ಕೇಂದ್ರ ಸರ್ಕಾರ ಅಸಮರ್ಪಕ ರೀತಿಯಲ್ಲಿ ಜಿಎಸ್ಟಿ ಜಾರಿಗೊಳಿಸಿದ್ದು, ಜನರ ಮೇಲೆ ತೆರಿಗೆಯ ಹೊರೆ ಬಿದ್ದಿದೆ ಎಂದು ಕಾಂಗ್ರೆಸ್ ಹೇಳಿದೆ. ಸರ್ಕಾರ ಜಿಎಸ್ಟಿ ಜಾರಿಗೊಳಿಸಿದ ರೀತಿಯು ಸರ್ಕಾರಕ್ಕೆ ಲಾಭದಾಯಕವಾಗಿದೆ ಆದರೆ ಜನರ ಪಾಲಿಗೆ ಕೆಟ್ಟದ್ದಾಗಿದೆ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ನವದೆಹಲಿ (ಜು. 08): ಕೇಂದ್ರ ಸರ್ಕಾರ ಅಸಮರ್ಪಕ ರೀತಿಯಲ್ಲಿ ಜಿಎಸ್ಟಿ ಜಾರಿಗೊಳಿಸಿದ್ದು, ಜನರ ಮೇಲೆ ತೆರಿಗೆಯ ಹೊರೆ ಬಿದ್ದಿದೆ ಎಂದು ಕಾಂಗ್ರೆಸ್ ಹೇಳಿದೆ. ಸರ್ಕಾರ ಜಿಎಸ್ಟಿ ಜಾರಿಗೊಳಿಸಿದ ರೀತಿಯು ಸರ್ಕಾರಕ್ಕೆ ಲಾಭದಾಯಕವಾಗಿದೆ ಆದರೆ ಜನರ ಪಾಲಿಗೆ ಕೆಟ್ಟದ್ದಾಗಿದೆ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಜು.1 ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಜಿಎಸ್ಟಿ ವ್ಯವಸ್ಥೆಯು ನ್ಯೂನತೆಗಳಿಂದ ಕೂಡಿದ್ದು, ಜಿಎಸ್ಟಿ ಹೊರತಾಗಿಯೂ ರಾಜ್ಯ ಸರ್ಕಾರಗಳು ಮುನ್ಸಿಪಲ್ ತೆರಿಗೆಯನ್ನು ವಿಧಿಸಬೇಕಾದ ಅಗತ್ಯ ಉಂಟಾಗಿದೆ ಎಂದು ಮಾಜಿ ಕೇಂದ್ರ ಸಚಿವರಾದ ಸಿಬಲ್ ಹೇಳಿದ್ದಾರೆ.
ನ್ಯೂನತೆಗಳಿಗೆ ಉದಾಹರಣೆ ನೀಡಿದ ಸಿಬಲ್, ತಮಿಳುನಾಡಿನಲ್ಲಿ ರೂ. 100ಕ್ಕಿಂತ ಕಡಿಮೆ ದರವಿರುವ ಸಿನೆಮಾ ಟಿಕೆಟ್ ಮೇಲೆ ಶೇ. 18, ಹಾಗೂ ರೂ. 100ಕ್ಕಿಂತ ಮೇಲ್ಪಟ್ಟ ಟಿಕೆಟ್ ಮೇಲೆ ಶೇ. 28 ಜಿಎಸ್ಟಿ ವಿಧಿಸಲಾಗುತ್ತದೆ. ಜೊತೆಗೆ ಸಿನೆಮಾ ಟಿಕೆಟ್’ಗಳ ಮೇಲೆ ಇತರ ಶೇ. 30 ತೆರಿಗೆಯನ್ನು ವಿಧಿಸಲಾಗುತ್ತಿದೆ. ಜನಸಾಮಾನ್ಯರು ಸಿನೆಮಾ ಟಿಕೆಟ್ ಮೇಲೆ ಶೇ 48 ಅಥವಾ ಶೇ. 58 ತೆರಿಗೆ ಪಾವತಿಸಬೇಕಾಗುತ್ತಿದೆ, ಎಂದು ವಿವರಿಸಿದರು.
ಭಾರತದಲ್ಲಿ ಸಿನೆಮಾವು ಜನಸಾಮಾನ್ಯರಿಗೆ ಮನರಂಜನೆಯ ಪ್ರಮುಖ ಮಾಧ್ಯಮವಾಗಿದ್ದು, ಈ ರೀತಿ ತೆರಿಗೆ ವಿಧಿಸುವುದು ಸರಿಯಲ್ಲವೆಂದು ಅವರು ಹೇಳಿದ್ದಾರೆ.
ಅದೇ ರೀತಿ ಮಹಾರಾಷ್ಟ್ರ ಸರ್ಕಾರವು ಕೂಡಾ ತಮ್ಮ ನಷ್ಟವನ್ನು ಭರಿಸಲು ಶೇ. 2ರಷ್ಟು ರಸ್ತೆ ತೆರಿಗೆ ವಿಧಿಸಲು ಮುಂದಾಗಿದೆ, ಎಂದು ಸಿಬಲ್ ವಿವರಿಸಿದ್ದಾರೆ.
ಪ್ಯಾಕ್ ಮಾಡಿರಲಾಗದ ಗೋಧಿ ಹಿಟ್ಟು, ಬಿಸ್ಕತ್ತುಗಳ ಮೇಲೆ ಜಿಎಸ್ಟಿ ವಿಧಿಸಲಾಗುತ್ತದೆ, ಆದರೆ ಪ್ಯಾಕ್ ಮಾಡಿದ ಬಳಿಕ ಅವುಗಳಿಗೆ ಜಿಎಸ್ಟಿ ಅನ್ವಯವಾಗುತ್ತದ, ಎಂದು ಹೇಳಿದ ಅವರು, ಇಂದಿನ ದಿನಗಳಲ್ಲಿ ಪ್ಯಾಕ್ ಆಗಿರದ ವಸ್ತುಗಳನ್ನು ಯಾರು ಖರೀದಿಸುತ್ತಾರೆ. ತಿನ್ನುವ ವಸ್ತುಗಳು ಪ್ಯಾಕ್ ಆಗಿದ್ದರೆ ಉತ್ತಮವಲ್ಲವೇ ಎಂದು ಸಿಬಲ್ ಪ್ರಶ್ನಿಸಿದ್ದಾರೆ.