ದೇವರಿಗೆ ಸಲ್ವಾರ್ ಕಮೀಜ್ ತೊಡಿಸಿದ ಅರ್ಚಕ!
ಇಲ್ಲಿನ ಮೈಲಾದುತುರೈನ ಮಯೂರನಾಥ ಸ್ವಾಮಿ ದೇವಸ್ಥಾನದ ಅರ್ಚಕರೊಬ್ಬರು ಅಭಯಂಬಲ್ ದೇವತೆ ವಿಗ್ರಹಕ್ಕೆ ಸಲ್ವಾರ್ ಕಮೀಜ್ ರೀತಿಯ ಅಲಂಕಾರ ಮಾಡಿದ್ದು, ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ಚೆನ್ನೈ (ಫೆ.06): ಇಲ್ಲಿನ ಮೈಲಾದುತುರೈನ ಮಯೂರನಾಥಸ್ವಾಮಿ ದೇವಸ್ಥಾನದ ಅರ್ಚಕರೊಬ್ಬರು ಅಭಯಂಬಲ್ ದೇವತೆ ವಿಗ್ರಹಕ್ಕೆ ಸಲ್ವಾರ್ ಕಮೀಜ್ ರೀತಿಯ ಅಲಂಕಾರ ಮಾಡಿದ್ದು, ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕನನ್ನು ಸೇವೆಯಿಂದ ಕೈಬಿಡಲಾಗಿದೆ. 6 ತಿಂಗಳ ಹಿಂದಷ್ಟೇ ಸೇವೆಗೆ ನಿಯೋಜನೆಯಾಗಿದ್ದ ಅರ್ಚಕರ ಪುತ್ರಗೆ ದೇವಸ್ಥಾನದ ಆಚಾರ-ವಿಚಾರಗಳ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಹೀಗಾಗಿ ಶುಕ್ರವಾದ ದೇವತೆ ವಿಗ್ರಹ ಶುಚಿಗೊಳಿಸಿದ ಅರ್ಚಕರ ಪುತ್ರ ರಾಜ್, ಬಳಿಕ ದೇವತೆಗೆ ಸೀರೆ ತೊಡಿಸುವ ಬದಲು ಉತ್ತರ ಭಾರತದ ಶೈಲಿಯಲ್ಲಿ ನೀಲಿ ದುಪ್ಪಟ್ಟಾ, ಪಿಂಕ್ ಕಮೀಜ್ ಮತ್ತು ನೀಲಿ ಸಲ್ವಾರ್ ತೊಡಿಸಿದ್ದ. ಈ ಅಚಾತುರ್ಯವನ್ನು ಮನಗಾಣದ ಪ್ರಧಾನ ಅರ್ಚಕ ಸಹ ದೇವಿಯ ವಿಗ್ರಹದ ಫೋಟೊ ಕ್ಲಿಕ್ಕಿಸಿ, ಫೇಸ್ಬುಕ್ಕಲ್ಲಿ ಹಾಕಿದ್ದರು. ಅದು ವಿವಾದಕ್ಕೆ ಕಾರಣವಾದ ಬಳಿಕ ಅಪ್ಪ, ಮಗ ಇಬ್ಬರನ್ನೂ ಸೇವೆಯಿಂದ ಕೈಬಿಡಲಾಗಿದೆ.