ಗೌರಿ ಹತ್ಯೆ ತನಿಖೆ : ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದ್ರಜಿತ್ ಲಂಕೇಶ್ ಗರಂ
- ರಾಜಕೀಯ ಕೋನದಿಂದ ಮಾತ್ರ ತನಿಖೆ, ನಿರೀಕ್ಷೆಯೆಲ್ಲ ಹುಸಿಯಾಗಿದೆ
- ಸಿಬಿಐ ತನಿಖೆಗಾಗಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಗೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸಹೋದರ ಇಂದ್ರಜಿತ್ ಲಂಕೇಶ್ ಹರಿಹಾಯ್ದಿದ್ದಾರೆ.
‘ಗೌರಿ ಹತ್ಯೆಯಾಗಿ 5 ತಿಂಗಳುಗಳಾದರೂ ತನಿಖೆಯು ನಿಂತ ನೀರಾಗಿದೆ, ರಾಜಕೀಯವಾಗಿ ಒಂದೇ ಕೋನದಿಂದ ತನಿಖೆಯಾಗುತ್ತಿದೆ. ಮಾಧ್ಯಮ ಸಲಹೆಗಾರರ ಮೂಲಕ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ಮಾಡಿ ಕೇಂದ್ರ ಸರ್ಕಾರವನ್ನು ಬೈಯುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಶ್ನೆ ಮಾಡೋದನ್ನು ಬಿಟ್ಟು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿರುವುದು ನನಗೆ ಜೀರ್ಣವಾಗುತ್ತಿಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖೆಯಲ್ಲಿ ರಾಜಕೀಯ ನಡೆಯುತ್ತಿದೆ. ಸರ್ಕಾರದ ಒತ್ತಡದಿಂದ ಒಂದೇ ದಿಕ್ಕಿನಲ್ಲಿ ತನಿಖೆಯಾಗುತ್ತಿದೆ. ನಿರೀಕ್ಷೆಯೆಲ್ಲ ಹುಸಿಯಾಗಿದೆ. ತನಿಖೆಯ ಮೇಲೆ ವಿಶ್ವಾಸವಿಲ್ಲವಾಗಿದೆ. ಆದುದರಿಂದ ನಿವೃತ್ತ ಜಡ್ಜ್ ಅಥವಾ ಸಿಬಿಐ ತನಿಖೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇನೆ, ಎಂದು ಸುವರ್ಣನ್ಯೂಸ್’ಗೆ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.