ನವದೆಹಲಿ(ಸೆ.20): ಭಾರತದ ಇತಿಹಾಸದಲ್ಲೇ ಶ್ರೇಷ್ಠ ಮಹಾರಾಜನಾಗಿದ್ದ ಸಾಮ್ರಾಟ ಅಶೋಕನ ಜನ್ಮ ದಿನ ಹಾಗೂ ನಿಧನ ದಿನ ಯಾವಾಗ? ಮತ್ತು ಆ ದಿನಗಳನ್ನು ಆಚರಿಸಲಾಗುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಆರ್ಟಿಐ ಅರ್ಜಿದಾರರೊಬ್ಬರು ಎತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರದ ನಾಲ್ಕು ಸಚಿವಾಲಯಗಳಿಗೆ ಕೇಂದ್ರ ಮಾಹಿತಿ ಆಯೋಗ ಆದೇಶಿಸಿದೆ. ರಕ್ಷಣಾ, ಹಣಕಾಸು, ಗೃಹ ಮತ್ತು ಸಂಸ್ಕೃತಿ ಸಚಿವಾಲಯಗಳಿಂದ ವಿವರಣೆ ಕೇಳಲಾಗಿದೆ.
ಅರುಣ್ ಕುಮಾರ್ ಎಂಬವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಸಿಐಸಿ ಆಯುಕ್ತ ಆರ್ ಕೆ ಮಾಥುರ್ ಈ ಆದೇಶ ಜಾರಿಗೊಳಿಸಿದ್ದಾರೆ. ಅರ್ಜಿದಾರ ಅರುಣ್, ರಾಜ ಅಶೋಕನ ಜನ್ಮ ಹಾಗೂ ನಿಧನ ದಿನಾಂಕಗಳನ್ನು ತಿಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ದಿನಗಳ ಆಚರಣೆ ಆಚರಿಸಲಾಗುತ್ತಿದೆಯೇ? ಅಥವಾ ಅದಕ್ಕಾಗಿ ಏನಾದರೂ ಕ್ರಿಯಾ ಯೋಜನೆ ಹೊಂದಿದೆಯೇ ಎಂದು ಅವರು ಕೇಳಿದ್ದರು. ಪ್ರಧಾನಿ ಸಚಿವಾಲಯದಿಂದ ಅವರು ವಿವರಣೆ ಬಯಸಿದ್ದರು. ಮೌರ್ಯ ವಂಶದ ಮೂರನೇ ಚಕ್ರವರ್ತಿಯಾಗಿದ್ದ ಅಶೋಕ ಜಗದ್ವಿಖ್ಯಾತ ಅರಸರಲ್ಲಿ ಓರ್ವನಾಗಿದ್ದಾನೆ. ಆತ ಕ್ರಿ.ಪೂ. 304ರಲ್ಲಿ ಜನಿಸಿದ್ದು, ಕ್ರಿ.ಪೂ. 232ರಲ್ಲಿ ನಿಧನನಾಗಿದ್ದನು ಎಂದು ಇತಿಹಾಸ ಹೇಳುತ್ತದೆ.
