ಇವಿಎಂ ಸಂದೇಹ ಮೊದಲು ನಿವಾರಿಸಿ, ಪ್ರಣಬ್ ಮುಖರ್ಜಿ ಮನವಿ
ಇವಿಎಂ ಕುರಿತಾಗಿ ವಿಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ(ಮೇ.21): ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳನ್ನು ತಿದ್ದುಪಡಿ ಮಾಡಿರುವ ಆರೋಪಕ್ಕೆ ಕುರಿತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸವಾಲೊಡ್ಡುವ ಊಹಾಪೋಹಗಳಿಗೆ ಯಾವುದೇ ಸ್ಥಳವಿಲ್ಲ ಎಂದಿರುವ ಪ್ರಣಬ್, ಇವಿಎಂ ಮತಯಂತ್ರಗಳ ಕುರಿತು ಎದ್ದಿರುವ ಸಂದೇಹಗಳನ್ನು ಚುನಾವಣಾ ಆಯೋಗ ನಿವಾರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇವಿಎಂ ಹೊತ್ತೊಯ್ದ 500 ಮುಸುಕುಧಾರಿಗಳು: ಆತಂಕದಲ್ಲಿ ಆಯೋಗ!
ಈ ಕುರಿತು ಹೇಳಿಕೆ ನೀಡಿರುವ ಪ್ರಣಬ್ ಮುಖರ್ಜಿ, ಮತದಾರರ ತೀರ್ಪನ್ನು ತಿರುಚುವ ಆರೋಪವನ್ನು ತಳ್ಳಿ ಹಾಕುವ ವರದಿ ಕುರಿತು ತಮಗೆ ಕಾಳಜಿ ಇದೆ ಎಂದು ತಿಳಿಸಿದ್ದಾರೆ. ಇವಿಎಂ ಮತಯಂತ್ರಗಳ ಸುರಕ್ಷತೆ ಚುನಾವಣಾ ಆಯೋಗದ ಜವಾಬ್ದಾರಿ ಎಂದಿರುವ ಅವರು, ಈ ಕುರಿತಾದ ಸಂದೇಹಗಳನ್ನು ಆದಷ್ಟು ಬೇಗ ನಿವಾರಿಸಬೇಕೆಂದು ಮನವಿ ಮಾಡಿದ್ದಾರೆ.
ಬೆಳಗ್ಗೆಯಷ್ಟೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಕಾರ್ಯವನ್ನು ಶ್ಲಾಘಿಸಿದ್ದ ಪ್ರಣಬ್ ಮುಖರ್ಜಿ, ಆಯೋಗದ ಕಾರ್ಯವನ್ನು ಅನುಮಾನದಿಂದ ನೋಡುವುದು ಉಚಿತವಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.