ಮಾಜಿ ಪ್ರಧಾನಿ ಎಚ್.ಡಿ.ಜೇವೇಗೌಡರಿಗೆ ಇಂದು ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ. ಅನೇಕ ಉಪಜಾತಿಗಳನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ದೇವೇಗೌಡರು ವಾಲ್ಮೀಕಿ ಪ್ರಶಸ್ತಿಗೆ ಪಾತ್ರರಾಗುತ್ತಿರುವುದು ನಾಯಕ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.

ಚಿತ್ರದುರ್ಗ(ಅ.24): ಮಾಜಿ ಪ್ರಧಾನಿ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ. ದೇವೇಗೌಡರನ್ನು ರಾಜ್ಯ ಸರ್ಕಾರ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಚಿತ್ರದುರ್ಗದ ನಾಯಕ ಸಮಾಜ ಅಭಿನಂದನೆ ಸಲ್ಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್‌.ಜೆ. ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ. ಕಾಂತರಾಜ್‌, ಚಿತ್ರದುರ್ಗ ನಾಯಕ ಸಮಾಜದ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿ ನಾಯಕ, ನಗರಸಭೆ ಸದಸ್ಯ ದೀಪಕ್‌, ಮಾಜಿ ಸದಸ್ಯರಾದ ಸಿ.ಟಿ. ರಾಜೇಶ್‌, ತಿಪ್ಪೇಸ್ವಾಮಿ, ನಾಯಕ ಸಮಾಜದ ಮುಖಂಡರಾದ ಗುರುಸಿದ್ದಪ್ಪ ರಾಜ್ಯ ಸರ್ಕಾರಕ್ಕೆ ನಿರ್ಧಾರವನ್ನ ಅಭಿನಂದಿಸಿದ್ದಾರೆ.

ಅನೇಕ ಉಪಜಾತಿಗಳನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಿದ ಕೀರ್ತಿ ಎಚ್‌.ಡಿ. ದೇವೇಗೌಡರಿಗೆ ಸಲ್ಲಬೇಕು. ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಸ್ಥಾಪಿಸಿದ ಅವರು ವಾಲ್ಮೀಕಿ ನಾಯಕ ಜನಾಂಗದ ಮಠಕ್ಕೆ ಮೊಟ್ಟಮೊದಲು ಜಾಗ ನೀಡಿ ನಾಯಕ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರಮಿಸಿದ ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿ ರಾಜ್ಯ ಸರ್ಕಾರ ಗೌರವಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ನಾಯಕ ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.