ಕನ್ನಡದಲ್ಲಿ ಶಪಥ ಮಾಡಿದ್ದ ಕೇರಳ ಮಾಜಿ ಸಚಿವ ಇನ್ನಿಲ್ಲ
ಗಡಿ ಜಿಲ್ಲೆಯಿಂದ ಆಯ್ಕೆಯಾಗಿ, ನೆರೆ ರಾಜ್ಯ ಕೇರಳದಲ್ಲಿ ಕನ್ನಡದಲ್ಲಿಯೇ ಶಪಥ ಸ್ವೀಕರಿಸುವ ಮೂಲಕ ಕನ್ನಡ ಕಂಪು ಬೀರಿದ್ದು ಕೇರಳ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಇನ್ನಿಲ್ಲ.
ಮಂಗಳೂರು: ಕೇರಳದ ಗಡಿಯಲ್ಲಿ ಕನ್ನಡದ ಕಂಪು ಬೀರಿದ, ಮಂಜೇಶ್ವರ ಕ್ಷೇತ್ರ ಅಭಿವೃದ್ಧಿಯ ರೂವಾರಿಯಾಗಿದ್ದ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ(76) ಅಸೌಖ್ಯದಿಂದ ಶುಕ್ರವಾರ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಮೃತರ ದಫನ ಕಾರ್ಯ ಚೆರ್ಕಳ ಜುಮಾ ಮಸೀದಿ ವಠಾರದಲ್ಲಿ ಸಂಜೆ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. 1987 ರಿಂದ 2006ರ ತನಕ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, 2001 ರಿಂದ 2004 ರ ತನಕ ಕೇರಳ ರಾಜ್ಯದ ಸ್ಥಳೀಯಾಡಳಿತ ಖಾತೆ ಸಚಿವರಾಗಿದ್ದರು. 2001 ರಲ್ಲಿ ಎ.ಕೆ.ಆ್ಯಂಟನಿ ಸಚಿವ ಸಂಪುಟದಲ್ಲಿ ಸ್ಥಳೀಯಾಡಳಿತ ಖಾತೆ ಸಚಿವರಾಗಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಡಿನಾಡಿನ ಕನ್ನಡಿಗರ ಹೃದಯಸ್ಪರ್ಶಿಸಿದ್ದರು.