Asianet Suvarna News Asianet Suvarna News

ಜಡ್ಜ್ ವಿರುದ್ಧ ಆರೋಪ ಮಾಡಿದ ರೈತ ಜೈಲಿಗೆ

ತಮಿಳುನಾಡಿಗೆ ಕಾವೇರಿ ನದಿ ನೀರು  ಬಿಡುಗಡೆಗೊಳಿಸಲು ಕರ್ನಾಟಕಕ್ಕೆ ಸೂಚಿಸಿ 2006  ರಲ್ಲಿ ತೀರ್ಪು ಹೊರಡಿಸಿದ್ದ ಅಂದಿನ  ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಇನ್ನಿಬ್ಬರು ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಖಾಸಗಿ ದೂರು ದಾಖಲಿಸಿದ್ದ ಮಂಡ್ಯದ ರೈತ ಮುಖಂಡ ಎಂ.ಡಿ.ರಾಜಣ್ಣಗೆ ಹೈಕೋರ್ಟ್ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

Farmer go to jail who allegation on Judge

ಬೆಂಗಳೂರು (ಮೇ. 31): ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಗೊಳಿಸಲು ಕರ್ನಾಟಕಕ್ಕೆ ಸೂಚಿಸಿ 2006 ರಲ್ಲಿ ತೀರ್ಪು ಹೊರಡಿಸಿದ್ದ ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಇನ್ನಿಬ್ಬರು ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಖಾಸಗಿ ದೂರು ದಾಖಲಿಸಿದ್ದ ಮಂಡ್ಯದ ರೈತ ಮುಖಂಡ ಎಂ.ಡಿ.ರಾಜಣ್ಣಗೆ ಹೈಕೋರ್ಟ್ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣದ ಸಂಬಂಧ ಎಂ.ಡಿ.ರಾಜಣ್ಣ  ವಿರುದ್ಧ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ  ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಮತ್ತು ನ್ಯಾಯಮೂರ್ತಿ ಕೆ.ಎಸ್.ಮುದಗಲ್  ಅವರಿದ್ದ ವಿಭಾಗೀಯ ಪೀಠ, ಪ್ರಕರಣದಲ್ಲಿ ರಾಜಣ್ಣ ಅವರನ್ನು ತಪ್ಪಿತಸ್ಥ ಎಂಬುದಾಗಿ ನಿರ್ಧರಿಸಿ ಆರು ತಿಂಗಳು ಸಾಧಾರಣ ಜೈಲು  ಶಿಕ್ಷೆ ಮತ್ತು ಎರಡು ಸಾವಿರ ರು. ದಂಡ ವಿಧಿಸಿ  ಕೆಲ ದಿನಗಳ ಹಿಂದೆ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಧಾರರಹಿತ ಆರೋಪ ಮತ್ತು  ತೀರ್ಪಿನ ವಿರುದ್ಧ ನ್ಯಾಯಸಮ್ಮತವಲ್ಲದ ಟೀಕೆಯನ್ನು ರಾಜಣ್ಣ ಮಾಡಿದ್ದಾರೆ. ಅಲ್ಲದೆ, ಆರೋಪಗಳು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿ, ಕೋರ್ಟ್ ಆಡಳಿತವನ್ನು ಅಡ್ಡಿಪಡಿಸುವಂತಿದೆ. ಹೀಗಾಗಿ ರಾಜಣ್ಣ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂಬುದಾಗಿ ತೀರ್ಮಾನಿಸಲು ತೃಪ್ತಿಕರ ಸಾಕ್ಷ್ಯಾಧಾರಗಳು ಇವೆ ಎಂದು ತಿಳಿಸಿ
ಶಿಕ್ಷೆ ವಿಧಿಸಿದೆ.

ಖಾಸಗಿ ದೂರು ದಾಖಲಿಸಿದ್ದ ರಾಜಣ್ಣ:

ತಮಿಳುನಾಡಿಗೆ ದಿನಕ್ಕೆ 15 ಕ್ಯೂಸೆಕ್‌ನಂತೆ 10 ದಿನ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿ 2006 ರ ಸೆ.5 ರಂದು ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಇನ್ನಿಬ್ಬರು ನ್ಯಾಯಮೂರ್ತಿಗಳ ತ್ರಿದಸ್ಯ ಪೀಠ ಆದೇಶಿಸಿತ್ತು. ಈ ಆದೇಶದ ವಿರುದ್ಧ ಮಂಡ್ಯದ ರೈತ ಮುಖಂಡ ಎಂ.ಡಿ.ರಾಜಣ್ಣ ಮಂಡ್ಯ ಪ್ರಧಾನ ಸಿವಿಲ್ (ಕಿರಿಯ ವಿಭಾಗ) ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ತೀರ್ಪು ಹೊರಡಿಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಇತರೆ ಇಬ್ಬರು ನ್ಯಾಯಮೂರ್ತಿಗಳು, ಮುಖ್ಯಮಂತ್ರಿ ಹಾಗೂ ಇತರೆ ಗಣ್ಯರನ್ನು ದೂರಿನಲ್ಲಿ ಆರೋಪಿಗಳನ್ನಾಗಿ ಮಾಡಲಾಗಿತ್ತು. ನದಿ ನೀರು ಹಂಚಿಕೆ ವ್ಯಾಜ್ಯ ವಿಚಾರಣೆ ನಡೆಸುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲ. ಸಂಸತ್ತಿಗೆ ಮಾತ್ರ ಈ ವಿಚಾರ ಪರಿಗಣಿಸುವ ಅಧಿಕಾರವಿದೆ. ಹೀಗಿದ್ದರೂ ಕಾವೇರಿ ನೀರು ಬಿಡಲು ಕರ್ನಾಟಕಕ್ಕೆ ಸೂಚಿಸುವ ಮೂಲಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು
ಕಾನೂನಿನ ದುರುಪಯೋಗ ಮಾಡಿದ್ದಾರೆ.

ನ್ಯಾಯಮೂರ್ತಿಗಳು ಭ್ರಷ್ಟಾಚಾರ ನಡೆಸಿ  ತೀರ್ಪು ಪ್ರಕಟಿಸಿದ್ದು, ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ದೂರಿನಲ್ಲಿ ಆರೋಪಿಸಿ, ಅವರ ವಿರುದ್ಧ ಕ್ರಮ ಜರುಗಿಸಲು ಕೋರಲಾಗಿತ್ತು. ಈ ದೂರನ್ನು ಜೆಎಂಎಫ್‌ಸಿ ಕೋರ್ಟ್ ವಜಾಗೊಳಿಸಿತ್ತು. ಇದರಿಂದ ಮಂಡ್ಯದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ರಾಜಣ್ಣ ಅವರು ಕ್ರಿಮಿನಲ್ ರಿವಿಷನ್ ಅರ್ಜಿ ಸಲ್ಲಿಸಿದ್ದರು.

ಈ ದೂರನ್ನೂ ವಜಾಗೊಳಿಸಿದ್ದ ಮಂಡ್ಯ 4 ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಧಾರರಹಿತ ಆರೋಪ ಹೊರಿಸಿದ್ದಕ್ಕೆ ನ್ಯಾಯಾಂಗ ನಿಂದನೆ ಪ್ರಕರಣದಡಿ ರಾಜಣ್ಣ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಪತ್ರ ಬರೆದಿದ್ದರು.

ಅದರಂತೆ 2006 ರಲ್ಲಿ ರಾಜಣ್ಣ  ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತ  ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು 

Follow Us:
Download App:
  • android
  • ios