ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ನಕಲಿ ಮತದಾರರ ಚೀಟಿಯನ್ನು ಸೃಷ್ಟಿಸುತ್ತಿರುವ ಸ್ಥಳೀಯ ಶಾಸಕರು ಹಾಗೂ ಅವರ ಬೆಂಬಲಿಗರನ್ನು ಈ ಕೂಡಲೇ ಬಂಧಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ.

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ನಕಲಿ ಮತದಾರರ ಚೀಟಿಯನ್ನು ಸೃಷ್ಟಿಸುತ್ತಿರುವ ಸ್ಥಳೀಯ ಶಾಸಕರು ಹಾಗೂ ಅವರ ಬೆಂಬಲಿಗರನ್ನು ಈ ಕೂಡಲೇ ಬಂಧಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಎಎಪಿ ರಾಜ್ಯ ಸಂಚಾಲಕ ಶಿವಕುಮಾರ ಚೆಂಗಲರಾಯ, ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿನ ದೇವಸಂದ್ರ ವಾರ್ಡ್‌ನಲ್ಲಿ ಸ್ಥಳೀಯ ಪಾಲಿಕೆ ಸದಸ್ಯನ ಒಡೆತನದಲ್ಲಿನ ಸತ್ಯಸಾಯಿ ಆಸ್ಪತ್ರೆಯ ವಿಳಾಸ ನೀಡಿ 39 ಮತದಾರರ ಚೀಟಿಯನ್ನು ಸೃಷ್ಟಿಸಿ ಮತಪಟ್ಟಿಗೆ ಸೇರಿಸಿರುವುದು ಈಗಾಗಲೇ ಬಹಿರಂಗವಾಗಿದೆ. ಇದಕ್ಕೆ ಏಕಾಏಕಿ 1.25 ಲಕ್ಷ ಮತದಾರರು ಈ ಸಾಲಿನಲ್ಲಿ ನೂತನ ಮತದಾರರಾಗಿ ಸೇರ್ಪಡೆಗೊಂಡಿರುವುದು ಅಕ್ರಮಕ್ಕೆ ಪೂರಕವಾಗಿದೆ ಎಂದು ಆರೋಪಿಸಿದರು.

ನಕಲಿ ಮತದಾರರ ಚೀಟಿ ಸೃಷ್ಟಿಕಾರ್ಯದಲ್ಲಿ ತೊಡಗಿರುವ ಶಾಸಕ ಭೈರತಿ ಬಸವರಾಜ್‌, ಪಾಲಿಕೆ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈಗಿನ ಮತದಾರರ ಪಟ್ಟಿಯಲ್ಲಿ ಅವ್ಯವಹಾರಗಳನ್ನು ನಡೆಸಿರುವ ಸಂಬಂಧ ಸೂಕ್ತ ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದಲ್ಲಿ ನಕಲಿ ಮತ ಚೀಟಿ ಸೃಷ್ಟಿಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಮೊಮ್ಮಗ ಲಿಂಗರಾಜ ಅರಸ್‌ ಮಾತನಾಡಿ, ಶಾಸಕರು ಹಾಗೂ ಅವರ ಬೆಂಬಲಿಗರ ಈ ಕುಕೃತ್ಯದಿಂದಾಗಿ ಇಂದು ಕ್ಷೇತ್ರದಾದ್ಯಂತ ನಕಲಿ ಮತದಾರರು ಸೃಷ್ಟಿಯಾಗಿ ನಕಲಿ ಮತದಾನವಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ರಾಜ್ಯ ಚುನಾವಣಾ ಆಯೋಗವು ಈ ದಾಖಲೆಗಳೆಲ್ಲವನ್ನೂ ಪರಿಶೀಲಿಸಿ ಮತ್ತೊಮ್ಮೆ ಪರಿಷ್ಕೃತ ಮತದಾರರ ಪಟ್ಟಿಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ವಿ.ಸದಂ ಇನ್ನಿತರರು ಇದ್ದರು.