ನಕಲಿ ಅಂಕಪಟ್ಟಿ ಸೃಷ್ಟಿಸುತ್ತಿದ್ದ ಬೃಹತ್ ಜಾಲ ಪತ್ತೆ, ರ್ಯಾಂಕ್ ವಿಜೇತರಿಂದಲೇ ನಡೀತಿದೆ ಡೀಲ್!
ಶಿವಮೊಗ್ಗ(ಸೆ.27): ನಕಲಿ ಅಂಕಪಟ್ಟಿ ಸೃಷ್ಟಿಸುತ್ತಿದ್ದ ಬೃಹತ್ ಜಾಲವನ್ನು ಪತ್ತೆ ಹಚ್ಚುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ರಾಜ್ಯ ಹಾಗೂ ಹೊರರಾಜ್ಯದ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲದೆ ರಾಜ್ಯದ ವಿವಿಧೆಡೆ ಇರುವ 9 ವಿದ್ಯಾಸಂಸ್ಥೆಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರದ ಪೂನಾದಲ್ಲಿದ್ದ ಮೂವರು ಆರೋಪಿಗಳು ಎಂಸಿಎ, ಎಂಬಿಎ ಪದವಿಯಲ್ಲಿ ಅಂಕ ವಿಜೇತರಾಗಿದ್ದು, ಕರ್ನಾಟಕ ಮಾತ್ರವಲ್ಲದೇ ಇನ್ನೂ ಹಲವು ರಾಜ್ಯಗಳಲ್ಲಿ ಮಧ್ಯವರ್ತಿಗಳನ್ನು ನೇಮಿಸಿಕೊಂಡು ತಮ್ಮ ಕೆಲಸ ನಡೆಸುತ್ತಿದ್ದರು.
ಶಿವಮೊಗ್ಗ ಜಿಲ್ಲೆಯ ಸೊರಬದ ತೌನಿಫ್ ಭಾಷ ಎಂಬಾತ ಮಂಗಳೂರಿನಲ್ಲಿರುವ ಕಚೇರಿಗೆ ಪಾಸ್ಪೋರ್ಟ್ಗಾಗಿ ನಕಲಿ ಅಂಕಪಟ್ಟಿ ಸಲ್ಲಿಸಿದ್ದು, ಈ ಮೂಲಕ ಶಿವಮೊಗ್ಗ ಪೋಲಿಸರು ಮೂಲ ಹುಡುಕಲು ತನಿಖೆ ನಡೆಸಿದಾಗ ಬೃಹತ್ ಜಾಲವೇ ಪತ್ತೆಯಾಗಿದೆ.
ಅನುಮಾನಗೊಂಡ ಪಾಸ್ಪೋರ್ಟ್ ಅಧಿಕಾರಿಗಳು ಪರಿಶೀಲನೆಗೆಂದು ಜಿಲ್ಲಾ ಪೊಲೀಸ್ ಕಚೇರಿಗೆ ಕಳುಹಿಸಿದರು. ತನಿಖೆ ನಡೆಸಿದಾಗ ಭಾರಿ ವಂಚನೆ ಪತ್ತೆಯಾಗಿದೆ.
ಸೊರಬ ಠಾಣೆಗೆ ತೌಪಿಷ್ನನ್ನು ಕರೆಸಿ ವಿಚಾರಣೆ ನಡೆಸಿದಾಗ ಸೊರಬದ ಹನುಮಂತಪ್ಪ ಎಂಬಾತನ ಬಳಿ 12 ಸಾವಿರ ಹಣ ಕೊಟ್ಟು ಅಂಕಪಟ್ಟಿ ಪಡೆದಿದ್ದಾಗಿ ಹೇಳಿದ್ದಾನೆ. ಹನುಮಂತಪ್ಪನ ವಿರುದ್ಧ ಕೇಸು ದಾಖಲಿಸಿ, ವಿಚಾರಣೆಗೊಳ ಪಡಿಸಿದಾಗ ಪೂನಾದ ಮೂವರು ನಕಲಿ ಅಂಕಪಟ್ಟಿ ಸರಬರಾಜು ಮಾಡುತ್ತಿದ್ದುದು ಬಯಲಾಗಿದೆ.