ಬಾಲಾಕೋಟ್‌ ದಾಳಿ ಮುಚ್ಚಿಟ್ಟ ಪಾಕಿಸ್ತಾನದ ಬಣ್ಣ ಬಯಲು!| ಆ್ಯಂಬುಲೆನ್ಸ್‌ ಸಿಬ್ಬಂದಿಯಿಂದ ಮೊಬೈಲ್‌ ಕಸಿದು ಶವ ಸಾಗಣೆ| ಉಗ್ರರು ಸತ್ತಿದ್ದಾರೆ, 35 ಶವ ನೋಡಿದ್ದೇವೆ: ಪ್ರತ್ಯಕ್ಷದರ್ಶಿಗಳು| ಎಫ್‌-16 ಬಳಸಿದ ಬಗ್ಗೆ ಮಾಹಿತಿ ಕೊಡಿ: ಪಾಕ್‌ಗೆ ಅಮೆರಿಕ ತಾಕೀತು

ಇಸ್ಲಮಾಬಾದ್[ಫಮಾ.03]: ‘ಬಾಲಾಕೋಟ್‌ನಲ್ಲಿ ಭಯೋತ್ಪಾದಕ ಶಿಬಿರವೂ ನಡೆಯುತ್ತಿಲ್ಲ. ಭಾರತೀಯ ವಾಯುಪಡೆ ವಿಮಾನಗಳು ನಡೆಸಿದ ದಾಳಿಯಲ್ಲಿ ಒಂದು ಸಾವೂ ಸಂಭವಿಸಿಲ್ಲ’ ಎಂದು ವಾದಿಸುತ್ತಿರುವ ಪಾಕಿಸ್ತಾನದ ನಿಜಬಣ್ಣ ಬಯಲಾಗಿದೆ. ದಾಳಿ ನಡೆದ ಸ್ಥಳದಲ್ಲಿ ಅಪಾರ ಸಾವು- ನೋವು ಸಂಭವಿಸಿದ್ದರೂ, ಅದು ಬಾಹ್ಯ ಜಗತ್ತಿಗೆ ಗೊತ್ತಾಗದಂತೆ ಮುಚ್ಚಿಡಲು ಪಾಕಿಸ್ತಾನ ಎಲ್ಲ ಪ್ರಯತ್ನಗಳನ್ನೂ ನಡೆಸಿತ್ತು. ಇದನ್ನು ಪ್ರತ್ಯಕ್ಷದರ್ಶಿಗಳೇ ತಮಗೆ ತಿಳಿಸಿದ್ದಾರೆ ಎಂದು ವಿದೇಶಿ ಪತ್ರಕರ್ತೆಯೊಬ್ಬರು ವರದಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದ ವಿಮಾನಗಳು ದಾಳಿ ನಡೆಸಿದ ಬೆನ್ನಿಗೇ ಬಾಲಾಕೋಟ್‌ ಭಯೋತ್ಪಾದಕ ಶಿಬಿರ ಸ್ಥಳಕ್ಕೆ ಜನರು ಹೋಗದಂತೆ ಪಾಕಿಸ್ತಾನಿ ಯೋಧರು ಸುತ್ತುವರಿದರು. ಸ್ಥಳೀಯ ಪೊಲೀಸರಿಗೂ ಘಟನಾ ಸ್ಥಳಕ್ಕೆ ಹೋಗಲು ಅವಕಾಶ ಕೊಡಲಿಲ್ಲ. ಬಾಂಬ್‌ ದಾಳಿಯಿಂದ ಸಾವನ್ನಪ್ಪಿದ್ದ ಉಗ್ರರ ಶವಗಳನ್ನು ಸಾಗಿಸಲು ಆ್ಯಂಬುಲೆನ್ಸ್‌ಗಳನ್ನು ಕರೆಸಲಾಗಿತ್ತು. ಆ್ಯಂಬುಲೆನ್ಸ್‌ ಸಿಬ್ಬಂದಿ ಎಲ್ಲಿ ಫೋಟೋ, ವಿಡಿಯೋ ಸೆರೆ ಹಿಡಿದುಬಿಡುತ್ತಾರೋ ಎಂಬ ಕಾರಣಕ್ಕೆ ಅವರ ಮೊಬೈಲ್‌ ಫೋನ್‌ಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಪತ್ರಕರ್ತೆ ಫ್ರಾನ್ಸೆಸ್ಸಾ ಮಾರಿನೋ ವರದಿ ಮಾಡಿದ್ದಾರೆ.

‘ಬಾಂಬ್‌ ದಾಳಿ ನಡೆಸಿದ ಕೆಲವೇ ಹೊತ್ತಿನಲ್ಲಿ ಉಗ್ರರ 35 ಶವಗಳನ್ನು ಆ್ಯಂಬುಲೆನ್ಸ್‌ನಲ್ಲಿ ಸಾಗಣೆ ಮಾಡುತ್ತಿದ್ದನ್ನು ನೋಡಿದ್ದೇವೆ. ಆ ಪೈಕಿ 12 ಜನರು ಒಂದೇ ಕೋಣೆಯಲ್ಲಿ ಮಲಗಿದ್ದರು. ಪಾಕಿಸ್ತಾನ ಸೇನೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳೂ ಮೃತರಲ್ಲಿ ಸೇರಿದ್ದರು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳೂ ಆಗಿರುವ ಪ್ರತ್ಯಕ್ಷದರ್ಶಿಸಲು ತಿಳಿಸಿದ್ದಾರೆ ಎಂದು ಪತ್ರಕರ್ತೆ ಬರೆದಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ನಿವೃತ್ತ ಅಧಿಕಾರಿ, ಸ್ಥಳೀಯವಾಗಿ ಕರ್ನಲ್‌ ಸಲೀಂ ಎಂದು ಕರೆಯಲಾಗುವ ವ್ಯಕ್ತಿ ಕೂಡ ಬಾಂಬ್‌ ದಾಳಿಯಲ್ಲಿ ಬಲಿಯಾಗಿದ್ದಾನೆ. ಕರ್ನಲ್‌ ಜರಾರ್‌ ಜಾಕ್ರಿ ಎಂಬುವರು ಗಾಯಗೊಂಡಿದ್ದರೆ, ಸುಧಾರಿತ ಸ್ಫೋಟಕ ತಯಾರಿಸುವುದರಲ್ಲಿ ಪರಿಣತರನಾಗಿರುವ ಜೈಷ್‌ ಎ ಮೊಹಮ್ಮದ್‌ ತರಬೇತುದಾರ ಉಸ್ಮಾನ್‌ ಘನಿ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಲ್ಲಿ ವಿವರಿಸಿದ್ದಾರೆ.