ಕೈ ಶಾಸಕ ಮುನಿರತ್ನ ಮನೆ ಬಳಿ ಭಾರೀ ಸ್ಫೋಟ, ಓರ್ವ ವ್ಯಕ್ತಿಯ ದೇಹ ಛಿದ್ರ ಛಿದ್ರ
ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಹತ್ತಿರ ಭಾರೀ ಸ್ಫೋಟದ ಶಬ್ಧ| ನಿಗೂಢ ಸ್ಫೋಟದ ರಭಸಕ್ಕೆ ಒಬ್ಬ ವ್ಯಕ್ತಿಯ ದೇಹ ಛಿದ್ರ ಛಿದ್ರ| ಶಬ್ಧದ ತೀವ್ರತೆಗೆ ಅರ್ಧ ಕಿಲೋ ಮೀಟರ್ ಸುತ್ತಲಿನ ಜನರು ಗಾಬರಿ|
ಬೆಂಗಳೂರು[ಮೇ.19]: ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಹತ್ತಿರ ಭಾರೀ ಸ್ಫೋಟದ ಶಬ್ಧ ಕೇಳಿ ಬಂದಿದ್ದು, ನಿಗೂಢ ಸ್ಫೋಟದ ರಭಸಕ್ಕೆ ಒಬ್ಬ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ. ಇಷ್ಟೇ ಅಲ್ಲದೇ ಶಬ್ಧದ ತೀವ್ರತೆಗೆ ಅರ್ಧ ಕಿಲೋ ಮೀಟರ್ ಸುತ್ತಲಿನ ಜನರು ಗಾಬರಿಗೊಂಡಿದ್ದಾರೆ.
ಬೆಂಗಳೂರಿನ ವಯ್ಯಾಲಿಕಾವಲ್ 11ನೇ ಬಿ ಕ್ರಾಸ್ ಬಳಿ ಇರುವ ಮುನಿರತ್ನ ನಿವಾಸದ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ಸ್ಫೋಟಗೊಂಡಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ನಿಗೂಢ ಸ್ಫೋಟಕ್ಕೆ ಕಾರಣವೇನು ಎಂಬುವುದು ಇನ್ನೂ ಗೊತ್ತಾಗಿಲ್ಲ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಗ್ಯಾಸ್ ಕಟ್ಟರ್ ಗೆ ಸಿಲಿಂಡರ್ ತಂದಿದ್ದರು. ಸಿಲಿಂಡರ್ ಸ್ಫೋಟದಿಂದ ಈ ಘಟನೆ ನಡೆದಿರಬಹುದು. ಬಿಲ್ಡಿಂಗ್ ಡೆಮಾಲಿಷನ್ ಗಾಗಿ ಈ ಸಿಲಿಂಡರ್ ತಂದಿದ್ದರು. ಕಚೇರಿ ಬಳಿಯೇ ವೆಂಕಟೇಶ್ ಪೇಪರ್ ಓದುತ್ತಿದ್ದರು. ಘಟನೆ ಸ್ಥಳದಲ್ಲೇ ವೆಂಕಟೇಶ್ ಪ್ರತಿದಿನ ಓಡಾಡುತ್ತಿದ್ದರು- ಪ್ರತ್ಯಕ್ಷ ದರ್ಶಿ ರಾಜೇಶ್ ಹೇಳಿಕೆ
ನಿಖರ ಕಾರಣ ತಿಳಿದಿಲ್ಲ
ಘಟನೆಯ ಕುರಿತಾಗಿ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಿಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ಏನೂ ಅನ್ನೋದು ಗೊತ್ತಿಲ್ಲ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಆಗಮಿಸುತ್ತಿದೆ ಎಂದಿದ್ದಾರೆ.
"