ಬಿಹಾರದ ಮಹಾಮೈತ್ರಿಯಲ್ಲಿ ಬಿಕ್ಕಟ್ಟು ಇನ್ನೂ ತೀವ್ರಗೊಂಡಿದೆ.  ಆಕ್ರಮ ಸಂಪತ್ತು ಗಳಿಕೆ ವಿಚಾರದಲ್ಲಿ ಲಾಲೂ ಕುಟುಂಬ ಹಣದ ಮೂಲದ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಅಥವಾ ಉಪ ಮುಖ್ಯಮಂತ್ರಿ ಹುದ್ದೆಗೆ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕೆಂದು ಜೆಡಿಯು ಹೇಳಿದೆ.

ಪಾಟ್ನಾ: ಬಿಹಾರದ ಮಹಾಮೈತ್ರಿಯಲ್ಲಿ ಬಿಕ್ಕಟ್ಟು ಇನ್ನೂ ತೀವ್ರಗೊಂಡಿದೆ. ಆಕ್ರಮ ಸಂಪತ್ತು ಗಳಿಕೆ ವಿಚಾರದಲ್ಲಿ ಲಾಲೂ ಕುಟುಂಬ ಹಣದ ಮೂಲದ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಅಥವಾ ಉಪ ಮುಖ್ಯಮಂತ್ರಿ ಹುದ್ದೆಗೆ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕೆಂದು ಜೆಡಿಯು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾಮೈತ್ರಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನ ಮಾಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಜೆಡಿಯು ಈ ಬೇಡಿಕೆಯನ್ನಿಟ್ಟಿದೆ. ಆದರೆ ಆರ್’ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಜೆಡಿಯು ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.

ಲಾಲೂ ಯಾದವ್ 2006ರಲ್ಲಿ ಕೇಂದ್ರ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ನಡೆದಿದೆಯೆನ್ನಲಾದ ಭೂಹಗರಣಕ್ಕೆ ಸಂಬಂಧಿಸಿ ಸಿಬಿಐಯು ಇತ್ತೀಚೆಗೆ ಲಾಲೂ ವಿರುದ್ಧ ಪ್ರಕರಣ ದಾಖಲಿಸಿ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಲಾಲೂ ಪುತ್ರ ತೇಜಸ್ವಿ ಯಾದವ್ ಕೂಡಾ ಅದರಲ್ಲಿ ಫಲಾನುಭವಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಿತ್ರಪಕ್ಷಗಳಾದ ಜೆಡಿಯು ಹಾಗೂ ಆರ್’ಜೆಡಿ ನಡುವೆ ಬಿಕ್ಕಟ್ಟು ಉಂಟಾಗಿದೆ. ಜೆಡಿಯು ಬೇಡಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಲಾಲೂ, ತೇಜಸ್ವಿ ಯಾದವ’ರನ್ನು ಆಯ್ಕೆ ಮಾಡಿರುವುದು ಬಿಹಾರದ ಜನತೆಯೇ ಹೊರತು ರಾಜೀನಾಮೆ ಕೇಳುತ್ತಿರುವವರು ಅಲ್ಲವೆಂದಿದ್ದಾರೆ.