ಯೋಗ ದಿನಾಚರಣೆ ವೇಳೆ ಕುಸಿದು ಬಿದ್ದಿದ್ದ ಮಾಜಿ ಜಿ.ಪಂ. ಸದಸ್ಯ ಸಾವು..!
ಯೋಗ ದಿನಾಚರಣೆ ಸಂದರ್ಭದಲ್ಲಿ ಕುಸಿದು ಬಿದ್ದಿದ್ದ ಜಿ. ಪಂ. ಮಾಜಿ ಸದಸ್ಯ
ಬೆಳಗಾವಿಯಲ್ಲಿ ನಿಧನ ಹೊಂದಿದ ಭಿಮನಗೌಡ ನಾಗಪ್ಪಗೌಡ ನಾಗರೆಡ್ಡಿ
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕನ್ನೋಳಿ ಗ್ರಾಮ
ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಭಿಮನಗೌಡ
ವಿಜಯಪುರ(ಜೂ.23): ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಕುಸಿದು ಬಿದ್ದಿದ್ದ ಜಿ. ಪಂ. ಮಾಜಿ ಸದಸ್ಯ ಭೀಮನಗೌಡ ನಾಗಪ್ಪಗೌಡ ನಾಗರೆಡ್ಡಿ ಕೊನೆಯುಸಿರೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೋಳ್ಳಿ ಜಿ. ಪಂ. ಮತ ಕ್ಷೇತ್ರದ ಮಾಜಿ ಸದಸ್ಯ ಭೀಮನಗೌಡ ನಾಗಪ್ಪಗೌಡ ನಾಗರೆಡ್ಡಿ(57) , ಕಳೆದ ಜೂ.೨೧ ರಂದು ವಿಜಯಪುರ ನಗರದ ಸಂಸ್ಕೃತಿ ಕಾಲೋನಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದಾಗ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು.
ಭೀಮನಗೌಡ ಅವರನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೊದಲಿಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಭೀಮನಗೌಡ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ವಿಜಯಪುರ ನಗರದ ಆದರ್ಶ ನಗರದ ನಿವಾಸದಲ್ಲಿ ಭೀಮನಗೌಡ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಸ್ವಗ್ರಾಮ ಸಿಂದಗಿ ತಾಲೂಕಿನ ಬನ್ನಿಹಟ್ಟಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.ಭೀಮನಗೌಡ ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇನ್ನು ಭೀಮನಗೌಡ ಅವರ ನಿಧನಕ್ಕೆ ಮಾಜಿ ಸಚಿವ ಎಂ. ಬಿ. ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.