ಅನ್ಸಾರಿ ದೇಶದ್ರೋಹದ ತನಿಖೆಗೆ ರಾ ಮಾಜಿ ಅಧಿಕಾರಿಗಳ ಆಗ್ರಹ!
ಹಮೀದ್ ಅನ್ಸಾರಿ ವಿರುದ್ಧ ಸಿಡಿದೆದ್ದ ಮಾಜಿ ರಾ ಅಧಿಕಾರಿಗಳು| ಮಾಜಿ ರಾಷ್ಟ್ರಪತಿ ವಿರುದ್ಧ ಮಾಜಿ ರಾ ಅಧಿಕಾರಿಗಳಿಂದ ದೇಶದ್ರೋಹದ ಆರೋಪ| ಅನ್ಸಾರಿ ಇರಾನ್ ರಾಯಭಾರಿಯಾಗಿದ್ದಾಗ ಭಾರತ ವಿರೋಧಿ ಕ್ರಮ?| ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ ಮಾಜಿ ರಾ ಅಧಿಕಾರಿಗಳು|
ನವದೆಹಲಿ(ಜು.08): ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ರಾಷ್ಟ್ರಪತಿ ಹಮೀದ್ ಅನ್ಸಾರಿ ವಿರುದ್ಧ ಮಾಜಿ ರಾ ಅಧಿಕಾರಿಗಳು ಗಂಭೀರ ದೇಶದ್ರೋಹದ ಆರೋಪ ಮಾಡಿದ್ದಾರೆ.
1990-92ರ ಅವಧಿಯಲ್ಲಿ ಅನ್ಸಾರಿ ಇರಾನ್ ರಾಯಭಾರಿಯಾಗಿದ್ದ ಸಮಯದಲ್ಲಿ, ಭಾರತದ ಭದ್ರತೆಗೆ ಸಂಬಂಧಿಸಿದಂತೆ ಹಲವು ಬಾರಿ ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮಾಜಿ ರಾ ಅಧಿಕಾರಿಗಳು ಆರೋಪಿಸಿದ್ದಾರೆ.
ಅಲ್ಲದೇ ಇರಾನ್’ನ ಗುಪ್ತಚರ ಸಂಸ್ಥೆ ಸೇವಾಕ್ ಭಾರತದ ವಿದೇಶಾಂಗ ಇಲಾಖೆಯ ಕೆಲವು ಅಧಿಕಾರಿಗಳನ್ನು ಅಪಹರಿಸಿದ್ದಾಗ ಅವರನ್ನು ಬಿಡುಗಡೆಗೊಳಿಸಲು ಯಾವುದೇ ಕ್ರಮ ಕೈಗೊಳ್ಳದ ಅನ್ಸಾರಿ, ಅದರ ಬದಲು ಸೇವಾಕ್’ಗೆ ಸಹಾಯ ಮಾಡುವ ಮೂಲಕ ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾತನಾಡಿರುವ ಮಾಜಿ ರಾ ಅಧಿಕಾರಿ ಎನ್.ಕೆ. ಸೂದ್, 1991ರಲ್ಲಿ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿ ಸಂದೀಪ್ ಕಪೂರ್ ಎಂಬುವವರನ್ನು ಸೇವಾಕ್ ಅಧಿಕಾರಿಗಳು ಅಪಹರಿಸಿದ್ದರು. ಈ ವೇಳೆ ಯಾವುದೇ ಕ್ರಮ ಕೈಗೊಳ್ಳದ ಅನ್ಸಾರಿ, ಕಪೂರ್ ಓರ್ವ ಸ್ಥಳೀಯ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಪರಿಣಾಮ ತಲೆಮರೆಸಿಕೊಂಡಿದ್ದಾರೆ ಎಂದು ವರದಿ ಬರೆಸಿದ್ದರು ಎಂದು ಸೂದ್ ಆರೋಪಿಸಿದ್ದಾರೆ.
ಅದರಂತೆ ಇರಾನ್’ನ ಖೋಆಂ ನಗರಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಕಾಶ್ಮೀರಿ ಯುವಕರ ಮೇಲೆ ರಾ ನಿಗಾ ಇಟ್ಟಿತ್ತು. ಆದರೆ ಇವರ ಮೇಲೆ ನಿಗಾ ವಹಿಸಿದ್ದ ರಾ ಅಧಿಕಾರಿಯ ಹೆಸರನ್ನು ಅನ್ಸಾರಿ ಸೇವಾಕ್ ಅಧಿಕಾರಿಗಳಿಗೆ ತಿಳಿಸಿದ್ದರು ಎಂದು ಸೂದ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸೂದ್ ಸೇರಿದಂತೆ ಕೆಲವು ಮಾಜಿ ರಾ ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ದೇಶದ್ರೋಹ ಎಸಗಿದ ಅನ್ಸಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.