ಶಂಕಿತ ಉಗ್ರರ ಬಳಿ ಶಸ್ತ್ರವೇ ಇರಲಿಲ್ಲ; ಪೊಲೀಸರ ಮೇಲೆ ದಾಳಿ ಹೇಗೆ ಸಾಧ್ಯ?
‘‘ಎಂಟು ಮಂದಿಗೂ ಪೊಲೀಸರು ಸೊಂಟಕ್ಕಿಂತ ಮೇಲ್ಬಾಗದಲ್ಲೇ ಗುರಿ ಇಟ್ಟು ಗುಂಡು ಹೊಡೆದಿದ್ದಾರೆ. ನ್ಯಾಯಾಲಯಗಳ ಆದೇಶಗಳ ಆಧಾರದಲ್ಲಿ ಹೇಳುವುದಾದರೆ ಪೊಲೀಸರು ಸೊಂಟಕ್ಕಿಂತ ಕೆಳಭಾಗಕ್ಕಷ್ಟೇ ಗುಂಡು ಹಾರಿಸಬೇಕು. ಈ ಪ್ರಕರಣದಲ್ಲಿ ಸಮೀಪದಿಂದಲೇ ತಲೆ, ಎದೆಗೆ ಗುಂಡಿಕ್ಕಲಾಗಿದೆ.''
ಭೋಪಾಲ/ಕೋಲ್ಕತಾ: ಭೋಪಾಲ ಕೇಂದ್ರ ಕಾರಾಗೃಹದಿಂದ ಪಾರಾರಿಯಾಗಿ ಎನ್ಕೌಂಟರ್ನಲ್ಲಿ ಅಸುನೀಗಿದ ಶಂಕಿತ ಸಿಮಿ ಕಾರ್ಯಕರ್ತರ ಬಳಿ ಆಯುಧಗಳೇ ಇರಲಿಲ್ಲ ಎಂದು ಮಧ್ಯಪ್ರದೇಶ ಉಗ್ರ ನಿಗ್ರಹ ದಳ (ಎಟಿಎಸ್)ಮುಖ್ಯಸ್ಥ ಸಂಜೀವ್ ಶಮಿ ಹೇಳಿದ್ದಾರೆ.
‘‘ ಶಂಕಿತ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ಪೊಲೀಸರು ಮಾಡಿದ ಫೈರಿಂಗ್ನಲ್ಲಿ ಉಗ್ರರು ಸತ್ತಿದ್ದಾರೆ,'' ಎಂದು ಅಲ್ಲಿನ ಐಜಿಪಿ ಯೋಗೇಶ್ ಚೌದ್ರಿ ಹೇಳಿದ್ದರು. ಆದರೆ, ಉಗ್ರರ ಬಳಿ ಶಸ್ತ್ರಾಸ್ತ್ರಗಳೇ ಇರಲಿಲ್ಲ ಎಂದು ಶಮಿ ಅವರು ನೀಡಿರುವ ಈ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
‘‘ಪೊಲೀಸರ ಬಲಪ್ರಯೋಗದ ಬಗ್ಗೆ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಅಪಾಯಕಾರಿ ಕ್ರಿಮಿನಲ್ಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದಾಗ ಗರಿಷ್ಠ ಶಕ್ತಿ ಪ್ರಯೋಗಿಸಲು ಸಾಧ್ಯ,' ಎಂದೂ ಅವರು ಹೇಳಿದ್ದಾರೆ. ಅಂಥ ವ್ಯಕ್ತಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸರಿಗೆ ಮನವರಿಕೆಯಾದಾಗ, ಅವರು ಗರಿಷ್ಠ ಪ್ರಮಾಣ ಶಕ್ತಿ ಪ್ರಯೋಗಿಸಬಹುದು'' ಎಂದೂ ಸಂಜೀವ್ ಶಮಿ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇತರರ ವೈದ್ಯಕೀಯ ಪರೀಕ್ಷೆಗೆ ಅರ್ಜಿ: ಜೈಲಿನಲ್ಲಿ ಇರುವ ಇತರ ಶಂಕಿತ ಸಿಮಿ ಕಾರ್ಯಕರ್ತರ ವೈದ್ಯಕೀಯ ಪರೀಕ್ಷೆ ನಡೆಸಲು ತಾವು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸುವುದಾಗಿ ಫರ್ವೇಜ್ ತಿಳಿಸಿದ್ದಾರೆ. ಎನ್ಕೌಂಟರ್ಗೆ ಬಲಿಯಾದ ಎಲ್ಲರ ಮೃತದೇಹಗಳನ್ನು ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ಅಹಮದಾಬಾದ್ ಮೂಲದ ಶೇಖ್ ಮುಜೀಬ್ನ ಮೃತದೇಹವನ್ನು ಆತನ ಕುಟುಂಬಸ್ಥರು ತವರೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಮೃತರ ಎಲ್ಲ ಕುಟುಂಬಸ್ಥರು ಪೊಲೀಸ್ ಎನ್ಕೌಂಟರ್ನ ಸತ್ಯಾಸತ್ಯತೆಯ ಕುರಿತು ಪ್ರಶ್ನಿಸಿದ್ದಾರೆ.
ಮರಣೋತ್ತರ ವರದಿ ಪ್ರಕಟ: ಶಂಕಿತ ಸಿಮಿ ಕಾರ್ಯಕರ್ತರಲ್ಲಿ ಎಲ್ಲರಿಗೂ ಕನಿಷ್ಠ ಎರಡು ಬಾರಿ ಗುಂಡೇಟು ತಗುಲಿದೆ. ಅವುಗಳಲ್ಲಿ ಕೆಲವು ಹಿಂದಿನಿಂದಲೂ ತಗುಲಿವೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ ಎಂದು ‘ಎನ್ಡಿಟಿವಿ' ವರದಿ ಮಾಡಿದೆ. ಎಲ್ಲ ಎಂಟು ಮಂದಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ತಜ್ಞರು ವರದಿ ನೀಡಿದ್ದಾರೆ. ಕೆಲವರಿಗೆ ಸೊಂಟದ ಮೇಲೆ ಎರಡಕ್ಕಿಂತ ಹೆಚ್ಚು ಗುಂಡು ತಗುಲಿವೆ. ನಾಲ್ಕು ಮಂದಿಯ ಪ್ರಕರಣಗಳಲ್ಲಿ ಗುಂಡುಗಳು ದೇಹಗಳನ್ನು ತೂರಿ ಹೋಗಿವೆ.
ಅನುಮಾನದ ಗುಂಡೇಟು:
‘‘ಎಂಟು ಮಂದಿಗೂ ಪೊಲೀಸರು ಸೊಂಟಕ್ಕಿಂತ ಮೇಲ್ಬಾಗದಲ್ಲೇ ಗುರಿ ಇಟ್ಟು ಗುಂಡು ಹೊಡೆದಿದ್ದಾರೆ. ನ್ಯಾಯಾಲಯಗಳ ಆದೇಶಗಳ ಆಧಾರದಲ್ಲಿ ಹೇಳುವುದಾದರೆ ಪೊಲೀಸರು ಸೊಂಟಕ್ಕಿಂತ ಕೆಳಭಾಗಕ್ಕಷ್ಟೇ ಗುಂಡು ಹಾರಿಸಬೇಕು. ಈ ಪ್ರಕರಣದಲ್ಲಿ ಸಮೀಪದಿಂದಲೇ ತಲೆ, ಎದೆಗೆ ಗುಂಡಿಕ್ಕಲಾಗಿದೆ,''ಎಂದು ವಕೀಲ ಫರ್ವೇಜ್ ಆಲಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
(ಕೃಪೆ: ಕನ್ನಡಪ್ರಭ)