ವಿದ್ಯುತ್ ಪ್ರವಹಿಸಿ ಕಂಬದಲ್ಲೇ ಇಬ್ಬರು ಕಾರ್ಮಿಕರ ದುರ್ಮರಣ
ಒಂದೇ ಲೈನಿನ ಎರಡು ಪ್ರತ್ಯೇಕ ವಿದ್ಯುತ್ ಕಂಬಗಳಲ್ಲಿ ಹೊಸ ತಂತಿಗಳನ್ನು ಜೋಡಿಸುತ್ತಿದ್ದ ಇಬ್ಬರು ಗುತ್ತಿಗೆ ಕಾರ್ಮಿಕರು ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಬ.ಬಾಗೇವಾಡಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಬಸವನಬಾಗೇವಾಡಿ: ಒಂದೇ ಲೈನಿನ ಎರಡು ಪ್ರತ್ಯೇಕ ವಿದ್ಯುತ್ ಕಂಬಗಳಲ್ಲಿ ಹೊಸ ತಂತಿಗಳನ್ನು ಜೋಡಿಸುತ್ತಿದ್ದ ಇಬ್ಬರು ಗುತ್ತಿಗೆ ಕಾರ್ಮಿಕರು ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಬ.ಬಾಗೇವಾಡಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊನ್ನೂರು ಗ್ರಾಮದ ಮಂಜು (18), ತಿಪ್ಪೇಸ್ವಾಮಿ (19) ಮೃತಪಟ್ಟ ಕಾರ್ಮಿಕರು. ಆಂಧ್ರಮೂಲದ ವ್ಯಕ್ತಿಯೊಬ್ಬರು ಕಂಬಗಳಿಗೆ ಹೊಸ ತಂತಿ ಜೋಡಣೆಯ ಗುತ್ತಿಗೆ ಪಡೆದಿದ್ದರು.
ಮಂಜು ಮತ್ತು ತಿಪ್ಪೇಸ್ವಾಮಿ ಇವರ ಕೈಕೆಳಗೆ ಕಳೆದ ಆರು ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಒಬ್ಬ ಸರ್ಕಾರಿ ಆಸ್ಪತ್ರೆ ಮುಂಭಾಗ ಮತ್ತು ಇನ್ನೊಬ್ಬ ಅಂಚೆ ಕಚೇರಿ ಮುಂಭಾಗದಲ್ಲಿ ಹೊಸ ತಂತಿ ಅಳವಡಿಸುತ್ತಿದ್ದರು.
ಈ ವೇಳೆ ವಿದ್ಯುತ್ತನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ತಾಲೂಕು ಆಸ್ಪತ್ರೆಯಲ್ಲಿ ಜನರೇಟರ್ ಚಾಲು ಮಾಡಿದ್ದರಿಂದ ರಿವರ್ಸ್ ಕರೆಂಟ್ ತಂತಿಯಲ್ಲಿ ಹರಿದು ಇಬ್ಬರು ಕಾರ್ಮಿಕರು ಕಂಬದಲ್ಲಿಯೇ ಅಸುನೀಗಿದ್ದಾರೆ. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹ ಕೆಳಗಿಳಿಸಿದ್ದಾರೆ.