ಪದ್ಮನಾಭ ದೇವಾಲಯದ 'ಬಿ ವಾಲ್ಟ್' ತೆರೆಯಲು ರಾಜಮನೆತನದಿಂದ ವಿರೋಧ
ಸುಪ್ರೀಂಕೋರ್ಟ್ ಆದೇಶದನ್ವಯ ಪದ್ಮನಾಭ ದೇವಾಲಯದ ಬಿ ಕೋಣೆಯನ್ನು ತೆರೆಯಲು ಟ್ರಾವೆಂಕೂರಿನ ರಾಜ ಮನೆತನ ವಿರೋಧ ವ್ಯಕ್ತಪಡಿಸಿದೆ.
ತಿರುವನಂತಪುರಂ (ಜು.08): ಸುಪ್ರೀಂಕೋರ್ಟ್ ಆದೇಶದನ್ವಯ ಪದ್ಮನಾಭ ದೇವಾಲಯದ ಬಿ ಕೋಣೆಯನ್ನು ತೆರೆಯಲು ಟ್ರಾವೆಂಕೂರಿನ ರಾಜ ಮನೆತನ ವಿರೋಧ ವ್ಯಕ್ತಪಡಿಸಿದೆ.
ದೇವರ ಆಶಯಕ್ಕೆ ವಿರುದ್ಧವಾಗಿ ಬಿ ಕೋಣೆಯನ್ನು ತೆರೆಯಲು ನಾವು ಅನುಮತಿ ನೀಡುವುದಿಲ್ಲ. ಇದನ್ನು ತೆರೆಯುವುದರಿಂದ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ಪದ್ಮನಾಭ ದೇವಾಲಯದ ಪ್ರಧಾನ ಅರ್ಚಕರೂ ಕೂಡಾ ಸರ್ಕಾರದ ಆದೇಶವನ್ನು ವಿರೋಧಿಸಿದ್ದಾರೆ ಎಂದು ರಾಜ ಮನೆತನದ ಹಿರಿಯ ಸದಸ್ಯ ತಿರುನಲ್ ಗೌರಿ ಲಕ್ಷ್ಮೀ ಬಾಯಿ ಹೇಳಿದ್ದಾರೆ.
ಈಗಾಗಲೇ ಒಮ್ಮೆ ಬಿ ಕೋಣೆಯನ್ನು ತೆರೆಯಲಾಗಿತ್ತು. ಆದರೆ ಇದಕ್ಕೆ ರಾಜಮನೆತನ ಈ ಹಿಂದೆಯೂ ಕೂಡಾ ಒಪ್ಪಿಗೆ ನೀಡಿರಲಿಲ್ಲ ಎಂದು ಲೆಕ್ಕ ಮತ್ತು ಮಹಾಪರಿಶೋಧಕ ವಿನೋದ್ ರಾಯ್ ಹೇಳಿದ್ದಾರೆ. ಬಿ ಕೋಣೆಯ ಪಕ್ಕದಲ್ಲಿ ಸಣ್ಣದೊಂದು ಕೋಣೆಯಿದೆ. ಇದನ್ನೇ ಬಿ ಕೋಣೆಯೆಂದು ತೆರೆಯಲಾಗಿತ್ತು ಅಷ್ಟೇ ಎಂದು ರಾಜಮನೆತನ ಸ್ಪಷ್ಟೀಕರಣ ನೀಡಿದೆ.
ಗರ್ಭಗುಡಿಯ ಮೂರ್ತಿಯಿಂದ 8 ವಜ್ರದ ಹರಳುಗಳು ನಾಪತ್ತೆಯಾಗಿದ್ದು ನೆಲಮಹಡಿಯಲ್ಲಿರುವ ಬಿ ಕೋಣೆಯನ್ನು ತೆರೆಯುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.