ಇದು ಹಿಂದೂಸ್ತಾನ. ಇಲ್ಲಿ ಕನ್ನಡ ಕಲಿಯ ಬೇಕಿಲ್ಲ. ನಿಮಗೆ ಹಿಂದಿ ಬಾರದಿದ್ದರೆ ಗೆಟ್‌'ಔಟ್‌' ಎಂದು ಗದರಿಸಿ ಧಾಷ್ಟ್ರ್ಯ ಪ್ರದರ್ಶಿಸಿದ ವಿದ್ಯಮಾನ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಘಟಿಸಿದೆ.

ಮಂಡ್ಯ(ಜೂ.24): ಒಂದೆಡೆ ಕೇಂದ್ರ ಸರ್ಕಾರಿ ನೌಕರಿಯಲ್ಲಿ ಹಿಂದಿ ಭಾಷಿಕರಿಗೆ ಆದ್ಯತೆ, ಮತ್ತೊಂದೆಡೆ ಅಂಚೆ ಕಚೇರಿ, ರೈಲ್ವೆ, ಬ್ಯಾಂಕು ಮತ್ತಿತರ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ, ಈಚೆಗಷ್ಟೇ ಬೆಂಗಳೂರಿನ ಮೆಟ್ರೋ ರೈಲಿನಲ್ಲೂ ಹಿಂದಿಗೆ ಮಹತ್ವ... ಹೀಗೆ ಹತ್ತು ಹಲವು ‘ಹಿಂದಿ ಹೇರಿಕೆ'ಗಳ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ನಡುವೆಯೇ ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸುವಂತಹ ಘಟನೆಯೊಂದು ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭಾರತೀಯ ಸ್ಟೇಟ್‌ ಬ್ಯಾಂಕ್‌ ಗ್ರಾಹಕರೊಬ್ಬರು ಬ್ಯಾಂಕಿಗೆ ಹೋಗಿದ್ದಾಗ ಅಲ್ಲಿನ ಕನ್ನಡ ಬಾರದ ಸಿಬ್ಬಂದಿಯೊಬ್ಬರು ‘ಇದು ಹಿಂದೂಸ್ತಾನ. ಇಲ್ಲಿ ಕನ್ನಡ ಕಲಿಯ ಬೇಕಿಲ್ಲ. ನಿಮಗೆ ಹಿಂದಿ ಬಾರದಿದ್ದರೆ ಗೆಟ್‌'ಔಟ್‌' ಎಂದು ಗದರಿಸಿ ಧಾಷ್ಟ್ರ್ಯ ಪ್ರದರ್ಶಿಸಿದ ವಿದ್ಯಮಾನ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಘಟಿಸಿದೆ.
ಘಟನೆ ಇದೀಗ ಫೇಸ್‌ಬುಕ್‌, ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆನ್‌'ಲೈನ್‌'ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕನ್ನಡಪರ ಹೋರಾಟಗಾರರೂ ಘಟನೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Add Asianetnews Kannada as a Preferred SourcegooglePreferred

ಹಿಂದಿಯಲ್ಲೇಮಾತು: ಉತ್ತರ ಭಾರತ ಮೂಲದ ಬ್ಯಾಂಕ್‌ ಲೆಕ್ಕಿಗ (ಅಕೌಂಟೆಂಟ್‌) ಸುನೀಲ್‌, ಬ್ಯಾಂಕಿಗೆ ಬಂದ ರೈತರೊಂದಿಗೆ ಹಿಂದಿಯಲ್ಲಿಯೇ ಸಂಭಾಷಣೆ ನಡೆಸಿದ್ದಾನೆ. ಇದರಿಂದ ಗೊಂದಲಕ್ಕೀಡಾದ ಗ್ರಾಹಕರು, ಕನ್ನಡದಲ್ಲಿ ಮಾತನಾಡುವಂತೆ ಆಗ್ರಹಿಸಿದ್ದಾರೆ.

ಇದಕ್ಕೆ ಕೆರಳಿದ ಸುನೀಲ್‌, ಇದು ಹಿಂದೂಸ್ತಾನ ಇಲ್ಲಿ ಕನ್ನಡ ಕಲಿಯಬೇಕಿಲ್ಲ. ಹಿಂದಿ ಬಾರದಿದ್ದರೆ ಹೊರ ಹೋಗಿ ಎಂದು ಧಾಷ್ಟ್ರ್ಯ ತೋರಿದ್ದಾನೆ. ಇದರಿಂದ ಕೆರಳಿದ ಗ್ರಾಹಕರು, ನಾವು ಹಳ್ಳಿ ಜನ. ನಮಗೆ ಕನ್ನಡವೇ ಓದಲು ಬರೆಯಲು ಬರೋದಿಲ್ಲ. ಇನ್ನು ಹಿಂದಿ ಕಲಿಯಲು ಎಲ್ಲಿಗೆ ಹೋಗೋಣ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ. ಇದರಿಂದ ಕೆಲ ಕಾಲ ದಂಗಾದ ಬ್ಯಾಂಕ್‌ ಇತರ ಸಿಬ್ಬಂದಿ, ಸಂಧಾನ ಮಾಡಿಸಿ, ಪ್ರಕರಣವನ್ನು ಸಮಾಪ್ತಿ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗದಿದ್ದರೂ, ನಾಡಿನಾದ್ಯಂತ ಸುದ್ದಿಯಾಗಿದೆ.