ಆಗ ರಾಜೀನಾಮೆ ಕೊಡಬೇಕಾಗುತ್ತೆ: ಬಿಎಸ್‌ವೈ | ಜಾರ್ಜ್ ತಲೆದಂಡವಾಗಬೇಕು

ಭಟ್ಕಳ/ಅಂಕೋಲಾ: ತೆರಿಗೆ ದಾಳಿಗೆ ಒಳಗಾಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಕುರಿತ ಮಾಹಿತಿ ಸದ್ಯದಲ್ಲೇ ಬಹಿರಂಗವಾಗಲಿದೆ. ಅದಾದ ಕೂಡಲೇ ಡಿಕೆಶಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ತಾಲೂಕಿನ ಮುರ್ಡೇಶ್ವರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಐಟಿ ದಾಳಿಗೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಕುಟುಂಬಸ್ಥರ ವಿಚಾರಣೆ ನಡೆಯುತ್ತಿದೆ. ಶೀಘ್ರವೇ ಐಟಿ ಅಧಿಕಾರಿಗಳು ಸಚಿವರ ಅಕ್ರಮ ಆಸ್ತಿ ಸಂಗ್ರಹ ಕುರಿತು ತಮ್ಮ ವರದಿ ಸಲ್ಲಿಸಲಿದ್ದು, ಮುಂದಿನ ದಿನಗಳಲ್ಲಿ ಡಿಕೆಶಿ ಅವರೂ ರಾಜೀನಾಮೆ ಸಲ್ಲಿಸುವ ಸಂದರ್ಭ ಬರಲಿದೆ ಎಂದರು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಹಿಸಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಅದಕ್ಕಾಗಿಯೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದೇವೆ. ಜಾರ್ಜ್ ವಿರುದ್ಧ ಸಿಬಿಐ ಜಾಮೀನು ರಹಿತ ಪ್ರಕರಣ (ಎಫ್‌ಐಆರ್) ದಾಖಲಿಸಿದ್ದು, ಅವರು ತಕ್ಷಣವೇ ರಾಜಿನಾಮೆ ನೀಡಬೇಕು.

ಇನ್ನು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಲ್ಯಾಪ್‌ಟಾಪ್ ಖರೀದಿ ಹಗರಣದಲ್ಲಿ ಪಾಲುದಾರರಾಗಿದ್ದು, ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.