ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಐಟಿ ತಂಡ 165 ಪ್ರಶ್ನೆಗಳನ್ನು ಕೇಳಿದ್ದಾರೆ.

ಬೆಂಗಳೂರು(ಆ.07): ಇಂದು ಐಟಿ ಅಧಿಕಾರಿಗಳು ಇಂಧನ ಸಚಿವ ಡಿ.ಕೆ ಶಿವಕುಮಾರ್ ಬೆವರಿಳಿಸಿದ್ದಾರೆ. 165 ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು..? ಡಿಕೆಶಿ ನೀಡಿದ ಉತ್ತರವೇನು..? ಇಲ್ಲಿದೆ ಡಿಟೇಲ್ಸ್

ದಾಳಿ ವೇಳೆ ಮನೆಯಲ್ಲಿ ಸಿಕ್ಕ ವಸ್ತುಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಐಟಿ ತಂಡ 165 ಪ್ರಶ್ನೆಗಳನ್ನು ಕೇಳಿದ್ದಾರೆ.

ಸಚಿವ ಡಿಕೆಶಿಗೆ ಐಟಿ ಪ್ರಶ್ನೆಗಳು

ನಿಮ್ಮ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು..?

ನಿಮ್ಮ ಶಿಕ್ಷಣ ಸಂಸ್ಥೆಗಳ ವಾರ್ಷಿಕ ವರಮಾನವೆಷ್ಟು..?

ಡೊನೇಷನ್ ಮೂಲಕ ಪಡೆದ ಹಣವನ್ನು ಸಿಬ್ಬಂದಿಗೆ ನೀಡಿದ್ದೀರಾ.?

 ಇದರಲ್ಲಿ ಎಷ್ಟು ಆದಾಯ ತೆರಿಗೆ ಕಟ್ಟಿದ್ದೀರಿ..?

ಶೋಭಾ ಡೆವಲಪರ್ಸ್​​ನಲ್ಲಿ ನಿಮ್ಮ ಬಂಡವಾಳ ಎಷ್ಟು..?

ಶೋಭಾ ಡೆವಲಪರ್ಸ್​​​ ಹೂಡಿಕೆಯನ್ನು ನಿಮ್ಮ ಆಸ್ತಿ ಪಟ್ಟಿಯಲ್ಲಿ ತೋರಿಸಿದ್ದೀರಾ..?

ಬಿಸ್ಕೆಟ್​​ ಕಂಪನಿಯಲ್ಲಿ ನಿಮ್ಮಪತ್ನಿಯ ಹೂಡಿರುವ ಬಂಡವಾಳ ಎಷ್ಟು..?

ನಿಮ್ಮ ಪತ್ನಿ ಹೆಸರಲ್ಲಿರುವ ಷೇರು ಪ್ರಮಾಣ ಎಷ್ಟು..?

2008ರಿಂದ 2016ರವರೆಗಿನ ಐಟಿ ರಿಟರ್ನ್ಸ್​​​ ಎಷ್ಟು..?

ನಿಮ್ಮ ಆಸ್ತಿ ಪ್ರಮಾಣ ದಿಢೀರ್​ ಹೆಚ್ಚಳದ ಮೂಲ ಯಾವುದು..?

ನಿಮ್ಮ ಪ್ಯಾನ್​​ ಕಾರ್ಡ್​​ನಲ್ಲಿ ಐಟಿ ರಿಟರ್ನ್ಸ್​​ ಅಪ್ಡೇಟ್​​ ಮಾಡಿದ್ದೀರಾ..?

ನಿಮ್ಮ ಪತ್ನಿ ಹಾಗೂ ಮಕ್ಕಳ ಬ್ಯಾಂಕ್​ ಖಾತೆಗಳೆಷ್ಟು..?

300 ಕೋಟಿ ರೂ ಮೌಲ್ಯದ ಆಸ್ತಿ ಘೋಷಣೆ ಯಾಕೆ ಮಾಡಿಕೊಂಡಿಲ್ಲ..?

2016-17 ಸಾಲಿನ ಐಟಿ ಪಾವತಿಯ ಮೊತ್ತ ಎಷ್ಟು..?

ಹೀಗೆ 165 ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ಕೇಳಿದ್ದು, ಡಿಕೆಶಿ ತಡಬಡಾಯಿಸಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರಿಸಿರುವ ಡಿಕೆ ಶಿವಕುಮಾರ್​​ ಉಳಿದ ಪ್ರಶ್ನೆಗಳಿಗೆ ತಮ್ಮ ಆಡಿಟರ್​​ ಉತ್ತರಿಸಲಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಡಿಕೆಶಿ ಸಾಲಗಾರ

ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಮಾಲೀಕ ಡಿ.ಕೆ.ಶಿವಕುಮಾರ್​ ಕೂಡ ಸಾಲ ಮಾಡಿದ್ದಾರೆಂತೆ. ಸುಮಾರು 75 ಕೋಟಿ 47 ಲಕ್ಷ ರೂಪಾಯಿ ಸಾಲ ಮಾಡಿದ್ದಾಗಿ ಡಿಕೆಶಿ ಐಟಿ ಆಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಅದರಲ್ಲಿಯೂ ತನ್ನ ಸಹೋದರ ಡಿ.ಕೆ.ಸುರೇಶ್​ ಬಳಿ 15 ಲಕ್ಷ, ಶಾಸಕ ಸಿ.ಪಿ.ಯೋಗೇಶ್ವರ್​​ ಬಳಿ 4 ಲಕ್ಷ ಸಾಲ ಮಾಡಿದ್ದಾರೆ. ಅಲ್ಲದೆ, ವಿವಿಧ ಕಂಪನಿಗಳ ಸ್ಥಾಪನೆಗಾಗಿ ಬ್ಯಾಂಕ್​ಗಳಲ್ಲಿ ಸಾಲ ಮಾಡಿದ್ದಾಗಿ ಹೇಳಿಕೊಂಡಿರುವ ಡಿ.ಕೆ.ಶಿವಕುಮಾರ್​, ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ನೋಟು ಅಮಾನ್ಯಗೊಳಿಸಿದ ನಂತರ ಐಟಿ ದಾಳಿಯ ಭಯದಿಂದಾಗಿ ಡಿಕೆಶಿ ಎಲ್ಲಾ ವ್ಯವಹಾರಗಳ ದಾಖಲೆ ಇಟ್ಟಿದ್ದಾರೆ. ಆದರೂ, 300 ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಆಸ್ತಿ ಪತ್ತೆಯಾಗಿರುವುದು ಡಿ.ಕೆ.ಶಿವಕುಮಾರ್​​ರನ್ನು ಸಂಕಷ್ಟಕ್ಕೆ ದೂಡಿದೆ. ಈ ಐಟಿ ಸುಳಿಯಿಂದ ಡಿಕೆಶಿ ಹೇಗೆ ಹೊರಗೆ ಬರ್ತಾರೆ ಅನ್ನೋದು ಸದ್ಯದ ಕುತೂಹಲ...

ವರದಿ: ರಮೇಶ್​​.ಕೆ.ಹೆಚ್​, ಸುವರ್ಣ ನ್ಯೂಸ್​