ಕುಮಾರ್ ಬಂಗಾರಪ್ಪ ಮೀಟ್ರೂ ನೋಡಿದ್ದೀನಿ, ಮೋಟ್ರೂ ನೋಡಿದ್ದೀನಿ: ಡಿಕೆಶಿ
ಸಿಎಂ ಕುಮಾರಸ್ವಾಮಿ ಮೀ ಟೂ ಅಭಿಯಾನಕ್ಕೆ ಸಿಲುಕುತ್ತಾರೆ ಎನ್ನುವ ಕುಮಾರ್ ಬಂಗಾರಪ್ಪ ಹೇಳಿಕೆಗೆ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ: ಮೀ ಟೂ ಅಭಿಯಾನದಲ್ಲಿ ಸಿಎಂ ಕುಮಾರಸ್ವಾಮಿ ಸಿಲುಕುತ್ತಾರೆ ಎಂಬ ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಸಚಿವ ಡಿ. ಕೆ. ಶಿವಕುಮಾರ್, ಕುಮಾರ್ ಬಂಗಾರಪ್ಪನ ಮೀಟ್ರೂ ನೋಡಿದ್ದೀನಿ. ಮೋಟ್ರೂ ನೋಡಿದ್ದೀನಿ ಎಂದು ಝಾಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುಮಾರ ಬಂಗಾರಪ್ಪ ನಮ್ಮ ಜೊತೆಗೇ ಇದ್ದವರು. ನನಗೆ ಎಲ್ಲವೂ ಗೊತ್ತು. ಕುಮಾರ್ ಬಂಗಾರಪ್ಪ ಮೂಲಕ ಯಾರು ಈ ರೀತಿ ಹೇಳಿಸಿದ್ದು, ಇದರ ಹಿಂದೆ ಯಾರು ಇದ್ದಾರೆ ಎಂಬುದೆಲ್ಲ ಗೊತ್ತು. ನಾನು ಹಲವರ ಪುಸ್ತಕ ತೆಗೆದರೆ ಎಲ್ಲವೂ ಹೊರ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಕುಮಾರಸ್ವಾಮಿ ಏನ್ ತಪ್ಪು ಮಾಡಿದ್ದಾರೆ? ಅವರನ್ನು ಯಾರು ಎಲ್ಲಿ ಬೇಕಾದರೂ ನಿಲ್ಲಿಸಬಹುದಾ? ಎಂದು ಪ್ರಶ್ನಿಸಿದರು.
ಮೈತ್ರಿ ಸರ್ಕಾರವನ್ನು ಉರುಳಿಸಲೆಂದೇ ಯಡಿಯೂರಪ್ಪ ಏನೇನೋ ಮಾಡುತ್ತಿದ್ದಾರೆ. ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ. ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಆದರೆ ಅದು ಯಶಸ್ವಿಯಾಗೋದಿಲ್ಲ. ನಮ್ದು ಒಂದು ಹೋದರೆ ಅವರದ್ದು ನಾಲ್ಕು ಬರುತ್ತೆ. ಇದು ಯಡಿಯೂರಪ್ಪನವರಿಗೆ ಗೊತ್ತಿರಲಿ. ಇವರು ಏನು ಮಾಡಿದರೂ ಎಲ್ಲವನ್ನೂ ನೋಡಿಕೊಂಡು ನಾವು ಸುಮ್ಮನೆ ಕೂತಿರಲ್ಲ ಎಂದರು.