ಕೊಲೆ ಕೇಸ್ : ಕಾಂಗ್ರೆಸ್ ಮುಖಂಡಗೆ ನೋಟಿಸ್
ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಧಾರವಾಡ [ಜು. 28]: ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿಗೆ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ನೋಟಿಸ್ ನೀಡಿದೆ.
ಅಲ್ಲದೆ, ಕೊಲೆಗೆ ಸಹಕರಿಸಿದ್ದಾರೆನ್ನಲಾದ ಕಾರಿನ ಚಾಲಕ ಮಂಜುನಾಥ ಬಸವಣ್ಣ ಅವರಿಗೂ ನೋಟಿಸ್ ನೀಡಲು ನ್ಯಾಯಾಲಯ ಆದೇಶಿಸಿದೆ. ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಅವರ ಕೈವಾಡ ಇರುವ ಕುರಿತು ಹಲವು ಬಾರಿ ತನಿಖಾಧಿಕಾರಿಗಳಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಆರೋಪಿತರು ಬಳಸಿದ್ದ ಕಾರಿನ ಬಗ್ಗೆಯೂ ತನಿಖಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.
ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಆದ್ದರಿಂದ ವಿನಯ ಕುಲಕರ್ಣಿ ಹಾಗೂ ಕಾರು ಚಾಲಕ ಮಂಜುನಾಥ ಅವರನ್ನು ಹೆಚ್ಚುವರಿ ಆರೋಪಿಗಳಾಗಿ ಮಾಡಬೇಕೆಂದು ಯೋಗೀಶಗೌಡ ಸಹೋದರ ಗುರುನಾಥ ಗೌಡ ಜಿಲ್ಲಾ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣದ ಸಂತ್ರಸ್ತರಿಗೆ ತಮ್ಮ ಅಭಿಪ್ರಾಯ ಹಾಗೂ ಸಂಶಯಗಳನ್ನು ಹೇಳಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿ, ವಿನಯ ಕುಲಕರ್ಣಿ ಹಾಗೂ ಮಂಜುನಾಥ ಅವರಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದರು. ಅರ್ಜಿದಾರರ ಪರ ನ್ಯಾಯವಾದಿ ದೀಪಕ ಶೆಟ್ಟಿವಕಾಲತ್ತು ವಹಿಸಿದ್ದರು.
ಹೆಚ್ಚುವರಿ ಆರೋಪಿಗಳಾಗಿ ಸೇರ್ಪಡೆ ಬೇಡ ಎಂದು ಆರೋಪಿತರ ಪರ ಹಾಗೂ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.