ಕುತೂಹಲದ ಬೆಳವಣಿಗೆ : ದಿನೇಶ್ ಗುಂಡೂರಾವ್ ಗೆ ಹೊಸ ಸಾರಥ್ಯ
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಸಾರಥ್ಯ ನೀಡಲು ಹೈಮಾಂಡ್ ಪರಿಗಣಿಸಿದ್ದು, ಶೀಘ್ರವೇ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.
ಬೆಂಗಳೂರು : ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಪರಿಗಣಿಸಿದ್ದು, ಶೀಘ್ರವೇ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಡಿ.ಕೆ. ಶಿವಕುಮಾರ್, ಕೃಷ್ಣಬೈರೇಗೌಡ, ಎಂ.ಬಿ.ಪಾಟೀಲ್, ಬಿ.ಕೆ.ಹರಿಪ್ರಸಾದ್ ಹಾಗೂ ಕೆ.ಎಚ್.ಮುನಿಯಪ್ಪರಂತಹ ಘಟಾನು ಘಟಿಗಳು ಪೈಪೋಟಿ ನಡೆಸುತ್ತಿದ್ದ ಈ ಸ್ಥಾನ ಪಡೆದುಕೊಳ್ಳಲು ದಿನೇಶ್ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ಡಿಕೆಶಿ, ಕೃಷ್ಣಬೈರೇಗೌಡ, ಎಂ.ಬಿ.ಪಾಟೀಲ್ ಸಂಪುಟಕ್ಕೆ ಸೇರುತ್ತಿರುವುದು ಒಂದು ಕಾರಣವಾದರೆ, ಹರಿಪ್ರಸಾದ್ ಹಾಗೂ ಮುನಿಯಪ್ಪರಂತಹ ಹಿರಿಯರ ಬದಲು ಯುವಕರಿಗೆ ಈ ಸ್ಥಾನ ನೀಡಬೇಕು ಎಂಬ ಹೈಕಮಾಂಡ್ ಚಿಂತನೆಯ ಲಾಭ ದಿನೇಶ್ ಗುಂಡೂರಾವ್ಗೆ ದೊರಕಿದೆ ಎನ್ನಲಾಗಿದೆ.