ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ.. ಈ ಸಾರಿ ಕೂಗು ಯಾರದ್ದು?
ಮತ್ತೆ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ. ಉಮೇಶ್ ಕತ್ತಿ, ಎ.ಎಸ್. ಪಾಟೀಲ್ ನಡಹಳ್ಳಿ ನಂತರ ಈ ಬಾರಿ ಇಂಥ ಸ್ವರ ಹೊರ ಹಾಕಿದವರು ಯಾರು?
ಬೆಳಗಾವಿjಜೂ30): ಒಮ್ಮೊಮ್ಮೆ ಪ್ರತ್ಯೇಕ ರಾಜ್ಯ ಆಗಬೇಕೆಂಬ ಮನಸ್ಸು ಆಗುತ್ತದೆ. ಅಖಂಡ ಕರ್ನಾಟಕ ಇರಬೇಕೆಂದು ನನ್ನ ಆಸೆಯೇ. ಆದರೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನನ್ನ ಒತ್ತಾಯವಿದೆ ಹೀಗೆಂದು ಹೇಳಿದ್ದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ.
ಬೆಳಗಾವಿಯಲ್ಲಿ ಮಾತನಾಡಿದ ತಿಮ್ಮಾಪುರ, ಎಲ್ಲ ಪಕ್ಷಗಳು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡದಿದ್ದರೆ ಪ್ರತ್ಯೇಕ ಧ್ವನಿ ಜನರದ್ದಾಗುತ್ತದೆ. ಜನರ ಧ್ವನಿ ಪ್ರತ್ಯೇಕ ರಾಜ್ಯದ್ದಾದರೆ ನನ್ನ ಧ್ವನಿಯು ಅದೇ ಇರುತ್ತೆ ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ ಆದರೆ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ. ಮಾಧ್ಯಮದವರು ನರಿ ಬಂತು ಹುಲಿ ಬಂತು ಅಂಥ ಕತೆ ಹೇಳುತ್ತಿವೆ. ಮಾಧ್ಯಮದವರಿಗೆ ಸಮ್ಮಿಶ್ರ ಸರ್ಕಾರ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ನಾನು ಯಾವತ್ತು ಕಾಂಗ್ರೆಸ್ ಪಕ್ಷದ ಸಚಿವರ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದೇನೆ ಹೊರತು ಅತೃಪ್ತರ ಪಟ್ಟಿಯಲ್ಲಿ ಅಲ್ಲ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನನ್ನದು ಅಖಂಡ ಕರ್ನಾಟಕ ಪರಿಕಲ್ಪನೆ: ಇನ್ನೊಂದು ಕಡೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ನನ್ನದು ಅಖಂಡ ಕರ್ನಾಟಕವೇ ಇರಬೇಕು ಎಂಬ ವಿಚಾರ. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ನಮ್ಮ ನಾಯಕರು ಸರಿ ಮಾಡತಾರೆ. ಎಲ್ಲದಕ್ಕೂ ಕಾಲಕೂಡಿ ಬರುತ್ತೆ. ಎಂ.ಬಿ.ಪಾಟೀಲರಿಗೆ ಖಂಡಿತವಾಗಿ ಸಚಿವ ಸ್ಥಾನ ಸಿಗುತ್ತೆ. ಬಿಜೆಪಿಯವರ ಜೊತೆ ನಾವು ಸಂಪರ್ಕದಲ್ಲಿದ್ದೆ ಎನ್ನುವುದು ಸುಳ್ಳು ಸುದ್ದಿ ಎಂದು ಹೇಳಿದರು.