ರಸ್ತೆ ಇಲ್ಲದ್ದರಿಂದ ತೆಪ್ಪದಲ್ಲಿ ಶವ ಸಾಗಿಸಿದರು!
ಮೃತದೇಹವನ್ನು ಸ್ವಗ್ರಾಮಕ್ಕೆ ಒಯ್ಯಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣದಿಂದ ತೆಪ್ಪದಲ್ಲಿಯೇ ಶವವನ್ನು ಸಾಗಿಸಿದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ನದಿಗೆ ಸೇತುವೆಯೂ ಇಲ್ಲದ ಕಾರಣ ತೆಪ್ಪವೇ ಇಲ್ಲಿನ ಜನರಿಗೆ ಆಧಾರವಾಗಿದೆ
ಮೂಡಿಗೆರೆ : ಅನಾರೋಗ್ಯದಿಂದ ನಿಧನರಾದ ವೃದ್ಧೆಯೊಬ್ಬರ ಶವವನ್ನು ತೆಪ್ಪದ ಮೂಲಕವೇ ಅವರ ಮನೆಗೆ ಸಾಗಿಸಿದ ಮನಕುಲಕುವ ಪ್ರಸಂಗ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲಕ್ಷ್ಮಮ್ಮ (70) ಎಂಬುವವರ ಮೃತದೇಹವನ್ನು ಅಂತಿಮಸಂಸ್ಕಾರಕ್ಕಾಗಿ ಸ್ವಗ್ರಾಮಕ್ಕೆ ತೆಪ್ಪದ ಮೂಲಕ ಸಾಗಿಸಲಾಯಿತು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಲಕ್ಷ್ಮಮ್ಮ ಅವರನ್ನು ಈ ಹಿಂದೆ ತೆಪ್ಪದಲ್ಲೇ ಕರೆದೊಯ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಸ್ವಗ್ರಾಮಕ್ಕೆ ಒಯ್ಯಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಹೀಗಾಗಿ, ಗ್ರಾಮಸ್ಥರು ಎಲ್ಲಿಗೆ ಹೋದರೂ ಭದ್ರಾ ನದಿ ದಾಟಿಕೊಂಡೇ ಹೋಗಬೇಕು. ಅದೇ ರೀತಿ ಗ್ರಾಮಸ್ಥರು ತೆಪ್ಪದಲ್ಲೇ ವೃದ್ಧೆಯ ಮೃತದೇಹವನ್ನು ಅವರ ಮನೆಗೆ ಸಾಗಿಸಿದ್ದಾರೆ.
ಕೊವೆ ಗ್ರಾಪಂ ವ್ಯಾಪ್ತಿಯಲ್ಲಿರುವ ಹೊಳೆಕೊಡಿಗೆ ಗ್ರಾಮದಲ್ಲಿ ಆದಿವಾಸಿ ಜನಾಂಗದ 6 ಕುಟುಂಬ ವಾಸಿಸುತ್ತಿವೆ. ಈ ಗ್ರಾಮಸ್ಥರು ಮಾಗುಂಡಿ ಹಾಗೂ ಬಾಳೆಹೊನ್ನೂರು ಅಥವಾ ಮೂಡಿಗೆರೆ ಹೋಗಬೇಕಾದರೆ, ನದಿಗೆ ಸೇತುವೆ ಇಲ್ಲದ ಕಾರಣ ತೆಪ್ಪವೇ ಆಧಾರವಾಗಿದೆ. ಗ್ರಾಮಕ್ಕೆ ರಸ್ತೆ ಇದ್ದರೂ, ಕಾಫಿ ಎಸ್ಟೇಟಿನ ಮಾಲೀಕರು ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ, ಗ್ರಾಮಸ್ಥರೆಲ್ಲ ತೆಪ್ಪದ ಮೂಲಕ ನದಿ ದಾಟಿಯೇ ತಮ್ಮ ದಿನನಿತ್ಯದ ಕೆಲಸಗಳಿಗೆ ತೆರಳಬೇಕು. ಮಳೆಗಾಲದಲ್ಲಂತೂ ಭದ್ರಾ ನದಿ ಉಕ್ಕಿ ಹರಿಯುವುದರಿಂದ ಗ್ರಾಮಸ್ಥರು ಪ್ರಾಣಭಯದಿಂದಲೇ ಓಡಾಡುವ ಪರಿಸ್ಥಿತಿ ಇದೆ.