ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಸಿಎಂ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ
ಸಿಎಂ ಸಿದ್ಧರಾಮಯ್ಯರ ಸೊಸೆ ಸ್ಮಿತಾ ರಾಕೇಶ್ ಸಿದ್ಧರಾಮಯ್ಯ ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು(ಜೂ.18): ಸಿಎಂ ಸಿದ್ಧರಾಮಯ್ಯರ ಸೊಸೆ ಸ್ಮಿತಾ ರಾಕೇಶ್ ಸಿದ್ಧರಾಮಯ್ಯ ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ತಮ್ಮ ನಿವಾಸದ ಹೊರಗೆ ರಾತ್ರಿಯಲ್ಲಿ ಅಪರಿಚಿತರು ಓಡಾಟ ನಡೆಸುತ್ತಿದ್ದಾರೆ. ಎರಡು ದಿನದ ಹಿಂದೆ ಹಲಸಿನ ಮರ ಹಣ್ಣುಗಳನ್ನು ಯಾರೋ ಕಿತ್ತು ಹಾಕಿದ್ದರು. ಇದಲ್ಲದೆ ಹೊರಗಿನ ಲೈಟ್ ಅನ್ನು ಒಡೆದು ಹಾಕಿದ್ದರು. ಮನೆಯಲ್ಲಿ ನಾನು ಮತ್ತು ನನ್ನ ತಾಯಿ, ಮಕ್ಕಳು ವಾಸವಾಗಿದ್ದು ಯಾರೋ ತಿಳಿದವರೇ ಈ ರೀತಿ ಕೃತ್ಯ ಎಸಗುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಜೂನ್. 15 ರಂದು ರಾತ್ರಿ ಈ ಘಟನೆ ನಡೆದಿದ್ದು, ನಿನ್ನೆ ಸ್ಮಿತಾ ಪೊಲೀಸ್ ರಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಇದೇ ರೀತಿಯ ಸನ್ನಿವೇಶ ಪದೇ ಪದೇ ಮರುಕಳಿಸಿದ ಹಿನ್ನೆಲೆ, ಪೊಲೀಸರಿಗೆ ದೂರು ನೀಡಿದ್ದಾರೆ. ಜೂನ್ 15 ರ ಮಧ್ಯ ರಾತ್ರಿ 2 ಗಂಟೆಗೆ ಕಾಂಪೌಂಡ್ ಒಳಗೆ ಜೋರಾಗಿ ಶಬ್ದವಾಗಿದೆ. ಈ ವೇಳೆ ನಾಯಿ ಜೋರಾಗಿ ಬೊಗಳಲು ಆರಂಭಿಸಿದೆ. ಇದರಿಂದ ಎಚ್ಚರಗೊಂಡು ಹೊರ ಬಂದು ನೋಡಿದ್ದಾಗ ಮನೆಯ ಅಂಗಳದಲ್ಲಿ ಹಲಸಿನ ಹಣ್ಣು ಬಿದ್ದಿತ್ತು. ಇದಲ್ಲದೆ ಹೊರ ಆವರಣದ ಲೈಟ್ ಕೂಡ ದ್ವಂಸವಾಗಿತ್ತು ಎಂದು ಸ್ಮಿತಾ ದೂರಿನಲ್ಲಿ ತಿಳಿಸಿದ್ದಾರೆ.
ಮಲ್ಲೇಶ್ವರಂ ನ 18 ಕ್ರಾಸ್ ನಲ್ಲಿ ವಾಸವಿರುವ ಸ್ಮಿತಾ, ಸ್ವತಃ ತಾವೇ ದೂರು ಸಲ್ಲಿಸಿದ್ದು, ತಮಗೆ ಸೂಕ್ತ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾರೆ. ಈಗ ಸ್ಮಿತಾ ಮನೆಗೆ ಪಿಂಕ್ ಹೊಯ್ಸಳ ಮತ್ತು ಪೊಲೀಸರನ್ನು ರಕ್ಷಣೆಗೆ ನಿಯೋಜಿಸಲಾಗಿದೆ.