ಪಾರಂಪರಿಕ ತಾಣಗಳನ್ನು ದತ್ತು ನೀಡುವ ಯೋಜನೆಯಡಿ, ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ನಿರ್ವಹಣೆಯನ್ನು ದಾಲ್ಮಿಯಾ ಭಾರತ್‌ ಕಂಪನಿಗೆ ನೀಡಲಾಗಿದೆ. ಆದರೆ ಸರ್ಕಾರದ ಕ್ರಮಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಸಿಸಿವೆ.

ನವದೆಹಲಿ: ಪಾರಂಪರಿಕ ತಾಣಗಳನ್ನು ದತ್ತು ನೀಡುವ ಯೋಜನೆಯಡಿ, ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ನಿರ್ವಹಣೆಯನ್ನು ದಾಲ್ಮಿಯಾ ಭಾರತ್‌ ಕಂಪನಿಗೆ ನೀಡಲಾಗಿದೆ. ಆದರೆ ಸರ್ಕಾರದ ಕ್ರಮಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಸಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನದಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ‘ಪಾರಂಪರಿಕ ತಾಣ ದತ್ತು ಪಡೆಯಿರಿ’ ಯೋಚನೆಗೆ ಚಾಲನೆ ನೀಡಿದ್ದರು. ಆ ಐತಿಹಾಸಿಕ ತಾಣಗಳನ್ನು ನಿರ್ವಹಿಸಲು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ವಾರ್ಷಿಕ 5 ಕೋಟಿ ರು.ಯಂತೆ ಐದು ವರ್ಷಕ್ಕೆ 25 ಕೋಟಿ ರು. ಬಜೆಟ್‌ನೊಂದಿಗೆ ಸಿಮೆಂಟ್‌ ಉತ್ಪಾದಕ ಕಂಪೆನಿ ದಾಲ್ಮಿಯ ಭಾರತ್‌, ‘ಸ್ಮಾರಕ ಮಿತ್ರ’ ಯೋಜನೆಗೆ ಕೈಜೋಡಿಸಿದೆ. ಕಂಪೆನಿ ಐದು ವರ್ಷಗಳ ವರೆಗೆ ಕೆಂಪುಕೋಟೆಯ ನಿರ್ವಹಣೆ, ಕಾರ್ಯಚರಣೆ ಹೊಣೆ ವಹಿಸಿಕೊಂಡಿದೆ.

ಯೋಜನೆಯಡಿ ಕಂಪೆನಿಯು ನಿರ್ಮಾಣ ಕಾಮಗಾರಿ, ಉದ್ಯಾನವನ ನಿರ್ಮಾಣ ಮತ್ತು ಬೆಳಕು ವ್ಯವಸ್ಥೆ ಆಯೋಜಿಸಬಹುದು. ಪ್ರವಾಸಿಗರನ್ನು ಆಕರ್ಷಿಸಲು ಬೇಕಾದ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸಬಹುದು. ಸ್ಮಾರಕದ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಎಲ್ಲರಿಗೂ ಸ್ಮಾರಕ ವೀಕ್ಷಣೆ ಅವಕಾಶ, ವಸ್ತುಗಳನ್ನು ಕಾಪಾಡಿಡುವ ಸೌಲಭ್ಯ, ರಾತ್ರಿ ವೀಕ್ಷಣೆ ಸೌಲಭ್ಯ, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಕಣ್ಗಾವಲು ವ್ಯವಸ್ಥೆ ಸೇರಿದಂತೆ ಪ್ರವಾಸಿಗರಿಗೆ ಅನುಕೂಲ ಮಾಡುವ ಸೌಲಭ್ಯಗಳನ್ನು ಒದಗಿಸಬಹುದು. ಧ್ವನಿ ಬೆಳಕು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲೂ ದಾಲ್ಮಿಯ ಕಂಪೆನಿ ಉದ್ದೇಶಿಸಿದೆ.

ಪ್ರವಾಸಿಗರಿಗೆ ಶುಲ್ಕ:

ಪ್ರವಾಸೋದ್ಯಮ ಸಚಿವಾಲಯದ ಅನುಮತಿ ಪಡೆದ ಬಳಿಕ, ಕೆಂಪುಕೋಟೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಂಪೆನಿ ಶುಲ್ಕ ವಿಧಿಸಬಹುದು. ಇದರಿಂದ ಬಂದ ಲಾಭವನ್ನು ನಿರ್ವಹಣೆ, ಅಭಿವೃದ್ಧಿ ಚಟುವಟಿಕೆಗೆ ಬಳಸಿಕೊಳ್ಳಬಹುದು. ಪಟ್ಟಿಯಲ್ಲಿ ಕರ್ನಾಟಕದ 5 ಸ್ಮಾರಕ: ಪಟ್ಟಿಯಲ್ಲಿ ಹಂಪೆ, ಐಹೊಳೆ, ಬದಾಮಿ, ಪಟ್ಟದಕಲ್ಲು ಮತ್ತು ಶ್ರೀರಂಗಪಟ್ಟಣದ ದರಿಯಾ ದೌಲತ್‌ ಭಾಗ್‌ ಕೂಡಾ ಸೇರಿವೆ.

ವ್ಯಾಪಕ ಟೀಕೆ: ಆದರೆ, ಸರ್ಕಾರದ ಈ ಯೋಜನೆಗೆ ಪ್ರತಿಪಕ್ಷ, ಇತಿಹಾಸಕಾರರು ಸೇರಿದಂತೆ ವಿವಿಧ ವಲಯಗಳಿಂದ ವ್ಯಾಪಕ ಟೀಕೆ ಕೇಳಿಬಂದಿದೆ. ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್‌, ಈ ಸಂಬಂಧ ಟ್ವಿಟರ್‌ ಸಮೀಕ್ಷೆಯೊಂದನ್ನು ಪ್ರಕಟಿಸಿದೆ. ಮುಂದೆ ಯಾವುದನ್ನು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಲೀಸ್‌ ನೀಡಲಿದೆ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಲೇಖಕ, ಇತಿಹಾಸಕಾರ ವಿಲಿಯಂ ಡೇಲ್ರಿಂಪಲ್‌ ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ‘ಸ್ಮಾರಕಗಳನ್ನು ಲೀಸ್‌ಗೆ ನೀಡಲು ಸರ್ಕಾರಕ್ಕೆ ಅಧಿಕಾರ ಕೊಟ್ಟವರು ಯಾರು? ಅವರು ಕೇವಲ ಸಂರಕ್ಷಕರು ಅಷ್ಟೇ. ಹೇಗೆ ಅವರು ಅವುಗಳನ್ನು ಹೀಗೆಯೇ ಯಾರೋ ಒಬ್ಬರಿಗೆ ಹಸ್ತಾಂತರ ಮಾಡುತ್ತಾರೆ?’ ಎಂದು ಅಖಿಲ ಭಾರತ ಇಮಾಮ್‌ ಸಂಘದ ಮೌಲಾನಾ ಮೊಹಮ್ಮದ್‌ ಸಜೀದ್‌ ರಶೀದ ಪ್ರಶ್ನಿಸಿದ್ದಾರೆ.