ನಕಲಿ ಛಾಪಾ ಕಾಗದ ಹಗರಣದ ಮೂಲಕ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರೋಪಿ ಕರೀಂಲಾಲ ತೆಲಗಿ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಅಲ್ಲಿ ಅವನಿಗೆ ರಾಯಲ್​ ಟ್ರೀಟ್ಮೆಂಟ್​ ನೀಡಲಾಗ್ತಿದೆ. ಅಲ್ಲಿಂದಲೇ ಆತ ತನ್ನ ಅವ್ಯವಹಾರಗಳನ್ನು ಮುಂದುವರಿಸುತ್ತಿದ್ದಾನೆ. ಇಂತದ್ದೊಂದು ದೂರು ಸಿಐಡಿಗೆ ಬಂದಿದೆ

ಬೆಂಗಳೂರು(ಫೆ.06): ನಕಲಿ ಛಾಪಾ ಕಾಗದ ಹಗರಣದ ಮೂಲಕ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರೋಪಿ ಕರೀಂಲಾಲ ತೆಲಗಿ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಅಲ್ಲಿ ಅವನಿಗೆ ರಾಯಲ್​ ಟ್ರೀಟ್ಮೆಂಟ್​ ನೀಡಲಾಗ್ತಿದೆ. ಅಲ್ಲಿಂದಲೇ ಆತ ತನ್ನ ಅವ್ಯವಹಾರಗಳನ್ನು ಮುಂದುವರಿಸುತ್ತಿದ್ದಾನೆ. ಇಂತದ್ದೊಂದು ದೂರು ಸಿಐಡಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಕಲಿ ಛಾಪಾ ಕಾಗದ ಹಗರಣದಲ್ಲಿ ಈಗ ಜೈಲಿನಲ್ಲಿರುವ ಕರೀಂ ಲಾಲಾ ತೆಲಗಿ ಅಲ್ಲಿ ಸುಮ್ನೆ ಕುಳಿತಿಲ್ಲ. ಅಲ್ಲಿಂದಲೇ ಆತ ತನ್ನ ಕಾರ್ಯಭಾರ ಮಾಡುತ್ತಿದ್ದಾನೆ. ಕ್ರಿಮಿನಲ್​'ಗಳ ಹೆಡ್​ ಆಫೀಸು ಪರಪ್ಪನ ಅಗ್ರಹಾರದಲ್ಲಿರುವ ಕರೀಂ ಲಾಲ ತೆಲಗಿಗೆ ಅಲ್ಲಿನ ಅಧಿಕಾರಿಗಳು ರಾಜ ಮರ್ಯಾದೆ ನೀಡುತ್ತಿದ್ದಾರೆ.

ಈ ಬಗ್ಗೆ ಪರಪ್ಪನ ಅಗ್ರಹಾರದಲ್ಲಿ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಮಾಜಿ ಕೈದಿ ಮನೋಜ್​ ಪವಾರ್​ ದೂರು ನೀಡಿದ್ದಾರೆ. ಜೈಲಿನಲ್ಲಿ ಕರೀಂ ಲಾಲಾ ತೆಲಗಿಯ ಅಕ್ರಮದ ಬಗ್ಗೆ ಸಿಐಡಿಯ ಡಿಜಿಪಿ, ರಾಜ್ಯ ಹೈಕೋರ್ಟ್​ ಮುಖ್ಯ ನ್ಯಾಯಾಧೀಶರು ಮತ್ತು ಗೃಹ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಜೈಲಿನ ಅಧಿಕಾರಿಗಳು ನಕಲಿ ಛಾಪಾ ಕಾಗದ ಹಗರಣದ ಆರೋಪಿಗೆ ರಾಯಲ್​ ಟ್ರೀಟ್ಮೆಂಟ್​ ಕೊಡುತ್ತಿದ್ದಾರೆ. ಆತ ಅಲ್ಲಿ ರಾಜಾರೋಷವಾಗಿ ಮೊಬೈಲ್​ ಬಳಸುತ್ತಿದ್ದಾನೆ. ಜೈಲಿನ ಒಳಗೆ ಕೂತೇ ತನ್ನ ಅವ್ಯವಹಾರಗಳನ್ನು ಮುಂದುವರಿಸಿದ್ದಾನೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೈಲಿನಲ್ಲಿ ಜಾಮರ್​ ಅಳವಡಿಸಿದ್ದರೂ ತೆಲಗಿ ಸೇರಿದಂತೆ ಹೈ ಫೈ ಕೈದಿಗಳ ಅನುಕೂಲಕ್ಕಾಗಿ ಜಾಮರ್​ ಸ್ಥಗಿತ ಮಾಡಲಾಗಿದೆ.

ಜೈಲಲ್ಲೇ ತೆಲಗಿಯ ಹಣಕಾಸು ವ್ಯವಹಾರ!: ಜೈಲಲ್ಲಿ ಕರೀಂಲಾಲಾ ತೆಲಗಿ ವಿವಿಐಪಿ ಕೈದಿ!

ಬೆಳಗಾವಿಯ ಮನೋಜ್​ ಬಿ ಪವಾರ್​ ಕಾರವಾರದ ಕೇಸ್​'ವೊಂದರಲ್ಲಿ ಜೈಲು ಸೇರಿದ್ದ. ಈ ವೇಳೆ ಪರಪ್ಪನ ಅಗ್ರಹಾರದಲ್ಲಿದ್ದಾಗ ತೆಲಗಿಗೆ ಜೈಲಿನ ಅಧಿಕಾರಿಗಳು ನೀಡುತ್ತಿರುವ ರಾಜ ಮರ್ಯಾದೆಯನ್ನ ಕಣ್ಣಾರೆ ಕಂಡಿದ್ದಾರೆ. ತೆಲಗಿ ಕೂಡ ಬೆಳಗಾವಿ ಮೂಲದವನಾಗಿದ್ದು ತನ್ನದೇ ಊರಿನ ಮನೋಜ್​ಗೆ ಜೈಲಿನಲ್ಲೇ 3 ಸಾವಿರ ಹಣ ಕೊಟ್ಟಿದ್ದಾನೆ. ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿರುವ ತೆಲಗಿಗೆ ಹಣದ ವ್ಯವಹಾರ ಮಾಡಲು ಹೇಗೆ ಸಾಧ್ಯ ಅನ್ನೋ ಅನುಮಾನ ಹುಟ್ಟಿದೆ. ಜೊತೆಗೆ ಜೈಲಿನಲ್ಲಿ ಮಾದಕ ವಸ್ತುಗಳು ರಾಜಾರೋಷವಾಗಿ ಸಿಗುತ್ತವೆ, ಇದಕ್ಕೆಲ್ಲ ಜೈಲು ಅಧಿಕಾರಿಗಳ ಸಹಕಾರ ಇದೆ ಅನ್ನೋದು ಮನೋಜ್​ ಆರೋಪ.

ಪರಪ್ಪನ ಅಗ್ರಹಾರದಲ್ಲಿರುವ ಅಧಿಕಾರಿಗಳಿಗೆ ಹಣದ ವಾಸನೆ ತೋರಿಸಿದರೆ ಸಾಕು, ಏನು ಬೇಕಾದರೂ ಮಾಡಬಹುದು ಎನ್ನುವ ವಾತಾವರಣ ಇರುವುದು ಎಲ್ಲರಿಗೂ ಗೊತ್ತಿರುವುದು ವಿಚಾರ. ಅಂತಹುದರಲ್ಲಿ ಕುಖ್ಯಾತ ವಂಚಕನಿಗೂ ಅಲ್ಲಿ ಹೈಫೈ ಟ್ರೀಟ್​ಮೆಂಟ್​ ಸಿಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.