ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇದರ ನಡುವೆಯೇ, ಸರ್ವಸಮ್ಮತ ರಾಷ್ಟ್ರಪತಿ ಅಭ್ಯರ್ಥಿಯನ್ನು ತಾನು ಬಯಸುವದಾಗಿ ಕಾಂಗ್ರೆಸ್‌ ಪಕ್ಷ ಹೇಳಿದೆ. ಅಲ್ಲದೆ, ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದೂ ಅದು ಚಾಟಿ ಬೀಸಿದೆ.

ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇದರ ನಡುವೆಯೇ, ಸರ್ವಸಮ್ಮತ ರಾಷ್ಟ್ರಪತಿ ಅಭ್ಯರ್ಥಿಯನ್ನು ತಾನು ಬಯಸುವದಾಗಿ ಕಾಂಗ್ರೆಸ್‌ ಪಕ್ಷ ಹೇಳಿದೆ. ಅಲ್ಲದೆ, ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದೂ ಅದು ಚಾಟಿ ಬೀಸಿದೆ. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಕಾಂಗ್ರೆಸ್‌ ಹಿರಿಯ ವಕ್ತಾರ ಆನಂದ ಶರ್ಮಾ, ‘ಈವರೆಗೂ ಸರ್ಕಾರದ ಕಡೆಯಿಂದ ಒಮ್ಮತದ ಅಭ್ಯರ್ಥಿಯ ಬಗ್ಗೆ ಸ್ಪಷ್ಟಚಿತ್ರಣ ಹೊರಹೊಮ್ಮಿಲ್ಲ. ಬಿಜೆಪಿಯ ಮಾನಸಿಕತೆ ನನಗೆ ಗೊತ್ತು. ಅವರ ಮಾನಸಿಕತೆ ದೇಶದ ವಿರುದ್ಧವಾಗಿದೆ. ಒಮ್ಮತದ ಅಭ್ಯರ್ಥಿ ಇರಬೇಕೆಂದು ನಾವು ಬಯಸುತ್ತೇವೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು' ಎಂದು ಹರಿಹಾಯ್ದರು.

ಇಂದು ಸೋನಿಯಾ-ಬಿಜೆಪಿ ಭೇಟಿ: ರಾಷ್ಟ್ರಪತಿ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯ ಆಯ್ಕೆ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬಿಜೆಪಿಯ ಅಭ್ಯರ್ಥಿ ಆಯ್ಕೆ ಸಮಿತಿ ಸದಸ್ಯರಾದ ರಾಜನಾಥ ಸಿಂಗ್‌ ಹಾಗೂ ವೆಂಕಯ್ಯ ನಾಯ್ಡು ಅವರು ಬೆಳಗ್ಗೆ 11ಕ್ಕೆ ದಿಲ್ಲಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.

ಮೆಟ್ರೋ ಶ್ರೀಧರನ್‌ ರಾಷ್ಟ್ರಪತಿ ಅಭ್ಯರ್ಥಿ?

‘ಮೆಟ್ರೋ ಮ್ಯಾನ್‌' ಖ್ಯಾತಿಯ ಇ. ಶ್ರೀಧರನ್‌ ಅವರ ಹೆಸರು ರಾಷ್ಟ್ರಪತಿ ಚುನಾವಣೆ ರೇಸ್‌ನಲ್ಲಿ ಕೇಳಿಬಂದಿದೆ. ಜೂ.17ರಂದು ಕೊಚ್ಚಿ ಮೆಟ್ರೋ ಉದ್ಘಾಟನೆಯ ವೇಳೆ ವೇದಿಕೆ ಹಂಚಿಕೊಳ್ಳಲಿರುವ ಗಣ್ಯರ ಪಟ್ಟಿಯಿಂದ ಇ ಶ್ರೀಧರನ್‌ ಅವರ ಹೆಸರನ್ನು ಪ್ರಧಾನಿ ಕಚೇರಿ ಕೈ ಬಿಟ್ಟಿದ್ದು, ಇಂಥದ್ದೊಂದು ವದಂತಿಗೆ ಕಾರಣವಾಗಿದೆ. ಮೆಟ್ರೋ ರೈಲು ಉದ್ಘಾ ಟನಾ ಸಮಾರಂಭದ ವೇದಿಕೆ ಪಟ್ಟಿಯಲ್ಲಿ ಶ್ರೀಧರನ್‌ ಹೆಸರು ಕೈಬಿಟ್ಟಿರುವುದಕ್ಕೆ ಇದೇ ಕಾರಣ. ರಾಷ್ಟ್ರಪತಿ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಮೋದಿ ಮತ್ತು ಶ್ರೀಧರನ್‌ ಒಂದೇ ವೇದಿಕೆ ಹಂಚಿಕೊಳ್ಳುವುದು ಅಷ್ಟುಸಮಂಜಸವಲ್ಲ ಎಂಬ ನಿಲುವನ್ನು ಬಿಜೆಪಿ ತಳೆದಿದೆ. ಹೀಗಾಗಿ ಅವರನ್ನು ವೇದಿಕೆಯಿಂದ ದೂರ ಉಳಿಸಲಾಗಿತ್ತು ಎಂದು ಹೇಳಲಾಗಿದೆ. ಆದರೆ ಈ ಊಹಾಪೋಹಗಳ ನಡುವೆಯೇ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಧರನ್‌ಗೆ ಅವಕಾಶ ಮಾಡಿಕೊಡಲಾಗಿದೆ.