ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಚುನಾವಣಾ ನಾಯಕತ್ವದಿಂದ ಹಿಡಿದು ಪ್ರಚಾರದವರೆಗೆ ಒಬ್ಬೊಬ್ಬರಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಮುಂದಿನ ಸಿಎಂ ಯಾರು ಅಂತ ಕೇಳಿದ್ರೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡ್ತಾರೆ.

ಬೆಂಗಳೂರು (ಸೆ.27): ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಚುನಾವಣಾ ನಾಯಕತ್ವದಿಂದ ಹಿಡಿದು ಪ್ರಚಾರದವರೆಗೆ ಒಬ್ಬೊಬ್ಬರಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಮುಂದಿನ ಸಿಎಂ ಯಾರು ಅಂತ ಕೇಳಿದ್ರೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡ್ತಾರೆ.

Add Asianetnews Kannada as a Preferred SourcegooglePreferred

ನಾಡಹಬ್ಬ ದಸರಾ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ತಮಾಷೆಯಾಗಿಯೇ ತಮ್ಮ ಮನಸ್ಸಿನ ಮಾತನ್ನು ಜನರ ಮುಂದಿಟ್ಟಿದ್ದರು. ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ ಆಗ್ಬೇಕು ಅನ್ನೋದು ಸಿದ್ದರಾಮಯ್ಯ ಕನಸು. ಅದನ್ನು ಈ ಬಾರಿಯೂ ನನಸು ಮಾಡ್ಕೋಬಹುದು ಅನ್ನೋ ಲೆಕ್ಕಾಚಾರದಲ್ಲೂ ಸಿದ್ದರಾಮಯ್ಯ ಇದ್ದಾರೆ. ಅದ್ರಲ್ಲೂ ಗುಂಡ್ಲುಪೇಟೆ-ನಂಜನಗೂಡು ಬೈ ಎಲೆಕ್ಷನ್ ಗೆಲುವಿನ ನಂತರ ಸಿದರಾಮಯ್ಯ ಮುಂದಿನ ಚುನಾವಣೆಗೂ ತಮ್ಮದೇ ನಾಯಕತ್ವ ಅಂತ ಘೋಷಿಸಿದ್ದರು. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ 110 ಹಳ್ಳಿಗಳಿಗೆ ನೀರು ಪೂರೈಸೋ ಕಾರ್ಯಕ್ರಮದಲ್ಲೂ ನಾನೇ ಮುಂದಿನ ಸಿಎಂ ಅಂತ ಹೇಳಿಕೊಂಡಿದ್ದರು. ಅದಾದ ನಂತರ ಮುಖ್ಯಮಂತ್ರಿ ಹುದ್ದೆ ತೀರ್ಮಾನ ಹೈಕಮಾಂಡ್ ಗೆ ಬಿಟ್ಟಿದ್ದು ಅಂತ ಸಮಜಾಯಿಷಿ ನೀಡಿದ್ದರೂ ನಾಡಹಬ್ಬ ದಸರಾದಲ್ಲಿ ಮತ್ತೊಮ್ಮೆ ಸಿಎಂ ಆಗೋ ಬಯಕೆಯನ್ನು ಮುಂದಿಟ್ಟಿದ್ದಾರೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಅಭಿಮಾನಿಗಳು, ಮತ್ತೆ ಸಿದ್ದರಾಮಯ್ಯ ಸಿಎಂ ಆಗ್ಬೇಕು ಅನ್ನೋ ಕ್ಯಾಂಪೇನ್ ಶುರುಮಾಡಿದ್ದಾರೆ. ಸಿಎಂ ಬೆಂಬಲಿಗರ ಈ ವರ್ತನೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಗರಂ ಆಗಿದ್ದಾರೆ.

ಯಾರು ಮುಂದಿನ ಸಿಎಂ ಅನ್ನೋದನ್ನು ಅಧಿಕಾರಕ್ಕೆ ಬಂದ ನಂತರ ಪಕ್ಷ ನಿರ್ಧರಿಸಲಿದೆ ಅನ್ನೋದರ ಮೂಲಕ ಈಗಲೇ ಸಿಎಂ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರನ್ನು ಒಪ್ಪಿಕೊಳ್ಳಲು ಪರಮೇಶ್ವರ್ ಸಿದ್ಧರಿಲ್ಲ. ಮುಂದಿನ ಚುನಾವಣೆಗೂ ತಾವೇ ಕೆಪಿಸಿಸಿ ಅಧ್ಯಕ್ಷರಾಗಿರೋದ್ರಿಂದ ಆಗ ತಾವೂ ಸಿಎಂ ಅಭ್ಯರ್ಥಿಯಾಗಬಹುದು ಅನ್ನೋದು ಪರಮೇಶ್ವರ್ ಲೆಕ್ಕಾಚಾರ. ಹೀಗಾಗಿ ಸಿದ್ದರಾಮಯ್ಯ ಪರ ಅವರ ಬೆಂಬಲಿಗರ ಬ್ಯಾಟಿಂಗ್ ಗೆ ತಡೆಯೊಡ್ಡಲು ಪರಮೇಶ್ವರ್ ಬೌನ್ಸರ್ ಎಸೆದಿದ್ದಾರೆ. ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೇರುವ ಗುರಿ ಇಟ್ಟಿರುವ ಕಾಂಗ್ರೆಸ್’ನಲ್ಲಿ ಸಿಎಂ ಕುರ್ಚಿಯ ಕಾದಾಟ ತೆರೆಮರೆಯಲ್ಲಿ ಜೋರಾಗುವ ಲಕ್ಷಣ ತೋರುತ್ತಿದೆ.