ಕೆರಳಿದ ಖರ್ಗೆ, ಮೋದಿ ನಾಲಿಗೆ ಬಿಗಿ ಹಿಡಿದು ಮಾತಾಡ್ಲಿ ಅಂದಿದ್ಯಾಕೆ..?
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಂಡಮಂಡಲವಾಗಿದ್ದು, ಮೋದಿ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದಿದ್ದಾರೆ. ಅಷ್ಟಕ್ಕೂ ಖರ್ಗೆ ಹೀಗೆ ಮಾತನಾಡಿದ್ಯಾಕೆ..?
ಬೆಂಗಳೂರು, [ಜ.12]: ಪ್ರಧಾನಿ ಮೋದಿ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ತಮ್ಮ ಸ್ಥಾನದ ಘನತೆ ಅರಿತು ಮಾತನಾಡಿದರೆ ಒಳ್ಳೆಯದು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಮಹಾಘಟಬಂಧನ್ ಕಳ್ಳರ ಸಂತೆ ಆದರೇ ಎನ್ಡಿಎ ಘಟಬಂಧನ್ ಕಳ್ಳರ ಸಂತೆ ಅಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ, ಘಟಬಂಧನ್ ಕಳ್ಳರ ಸಂತೆ ಎಂಬುದಾಗಿ ಆರೋಪಿಸಿದ್ದರು. ಈ ಹೇಳಿಕೆಗೆಗೆ ಖರ್ಗೆ ತಿರುಗೇಟು ನೀಡಿದರು.
ಇನ್ನು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿರುವ ಖರ್ಗೆ, ರಾಜ್ಯ ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು ಸಂಕ್ರಾಂತಿಗೆ ಕ್ರಾಂತಿಯೇನು ಆಗುವುದಿಲ್ಲ ಬಿಜೆಪಿಯವರು ತಮ್ಮ ಮನೆಗಳಲ್ಲಿ ಸಂಕ್ರಾಂತಿ ಹಬ್ಬ ಮಾಡ್ತಾರೆ ಅಷ್ಟೇ. ಬಿಜೆಪಿಯವರು ಇದೇ ರೀತಿ ಹೇಳುತ್ತಾ ನಾಲ್ಕೈ ದು ತಿಂಗಳೇ ಕಳೆದಿವೆ ಎಂದು ವ್ಯಂಗ್ಯವಾಡಿದರು.
ಯಾರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ತತ್ವ, ನೀತಿಗೆ ಅನುಗುಣವಾಗಿ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಸರ್ಕಾರದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿರಬಹುದು.
ಅದೆಲ್ಲವನ್ನೂ ಆಯಾ ಪಕ್ಷದ ನಾಯಕರು ಸರಿಪಡಿಸುತ್ತಾರೆ. ಬಿಜೆಪಿ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳಿವೆ, ಮೊದಲು ಅದನ್ನ ಸರಿಪಡಿಸಿಕೊಳ್ಳಲಿ ಎಂದು ಖರ್ಗೆ ತಿವಿದಿದ್ದಾರೆ.