ರಾಜಕೀಯ ಆಟ ಶುರು ಮಾಡಿದ ರೇವಣ್ಣ : ಕೈ ನಾಯಕರ ಆಕ್ರೋಶ
ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿದೆ. ಇದೇ ವೇಳೆ ಮತ್ತೊಂದು ಅಧಿಕಾರಕ್ಕಾಗಿ ಎಚ್ ಡಿ ರೇವಣ್ಣ ತಮ್ಮ ಆಟ ಶುರು ಮಾಡಿದ್ದು ಈ ಸಂಬಂಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ [ಜು.28] : KMF ಚುನಾವಣೆ ಸಂಬಂಧ ಮಾಜಿ ಸಚಿವ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ವಿರುದ್ಧ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೋಸ್ತಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದ ವೇಳೆ ನನ್ನ ಇಲಾಖೆಯಲ್ಲಿಯೂ ಕೈ ಹಾಕಿದ್ದ ರೇವಣ್ಣ ಇದೀಗ ಮತ್ತೊಂದು ತಂತ್ರ ನಡೆಸಿದ್ದಾರೆ ಎಂದು ವಿಜಯಪುರ ಶಾಸಕ ಶಿವಾನಂದ ಪಾಟೀಲ್ ಗರಂ ಆಗಿದ್ದಾರೆ.
ಹಿಂದೆಯೇ ರೇವಣ್ಣ ಕುತಂತ್ರದ ಬಗ್ಗೆ ನಮ್ಮ ನಾಯಕರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿರಲಿಲ್ಲ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಶಿವಾನಂದ ಪಾಟೀಲ್ ಹೇಳಿದರು.
ರಾಜೀನಾಮೆ ನೀಡಿದ 14 ಅತೃಪ್ತ ಶಾಸಕರು ಅನರ್ಹ: ಸ್ಪೀಕರ್ ನಿರ್ಧಾರ
KMF ಚುನಾವಣೆಯಲ್ಲಿ ಮೈತ್ರಿಯಲ್ಲಿ ಅಧ್ಯಕ್ಷ ಸ್ಥಾನವನ್ನು ನಮ್ಮ ಪಕ್ಷಕ್ಕೆ ನೀಡಬೇಕು ಎಂದು ಹಿರಿಯ ನಾಯಕರು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇದೀಗ ಚುನಾವಣೆ ಮುಂದೂಡಿಕೆ ಆಗುವ ಸಾಧ್ಯತೆ ಇದ್ದು, ಇದೇ ವೇಳೆ ಇಲ್ಲಿಯೂ ತಮ್ಮ ರಾಜಕೀಯ ಆಟ ಆರಂಭಿಸಿರುವ ರೇವಣ್ಣ KMF ಅಧ್ಯಕ್ಷರಾಗಲು ಬೇಕಾದಷ್ಟು ಸದಸ್ಯರನ್ನು ಸೆಳೆದಿದ್ದಾರೆ ಎನ್ನಲಾಗಿದೆ.
ಬೆಂಬಲ ವಿಚಾರ ಪ್ರಸ್ತಾಪ : ಇನ್ನು ಜೆಡಿಎಸ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ವಿಚಾರದ ಸಂಬಂಧ ಮಾಜಿ ಸಚಿವ ಶಿವಾನಂದ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಹ್ಯ ಬೆಂಬಲದ ವಿಚಾರ ಖಂಡಿತವಾಗಿ ಅಚ್ಚರಿಯನ್ನುಂಟು ಮಾಡಿದೆ ಎಂದು ಶಾಸಕ ಪಾಟೀಲ್ ಹೇಳಿದರು.