ಮೈತ್ರಿ ವಿರುದ್ಧ ಕೈ ನಾಯಕನ ಬಹಿರಂಗ ಅಸಮಾಧಾನ
ಲೋಕಸಭಾ ಚುನಾವಣೆ ಮುಕ್ತಾಯವಾದ ಬಳಿಕ ಇದೀಗ ಕೈ ನಾಯಕರಿಂದ ಮೈತ್ರಿ ವಿರುದ್ಧ ಬಹಿರಂಗ ಹಾಗೂ ಪರೋಕ್ಷವಾಗಿ ಅಸಮಾಧಾನ ಕೇಳಿ ಬರುತ್ತಿದೆ.
ರಾಮನಗರ : ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ - ಜೆಡಿಎಸ್ ಮೈತ್ರಿಯಲ್ಲಿ ಎದುರಿಸಿದ್ದು, ಕೇವಲ 2 ಸ್ಥಾನ ಗಳಿಸುವಲ್ಲಿ ಮಾತ್ರವೇ ಯಶಸ್ವಿಯಾದರು.
ಈ ನಿಟ್ಟಿನಲ್ಲಿ ಕೆಲ ಕಾಂಗ್ರೆಸ್ ನಾಯಕರು ಒಳಗೊಳಗೆ ಅಸಮಾಧಾನ ಹೊರಹಾಕುತ್ತಿದ್ದರೆ. ಕೆಲ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.
ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಸಿಎಂ ಲಿಂಗಪ್ಪ ಮೈತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವತಂತ್ರ ಬಂದ ನಂತರ ರಾಜ್ಯದಲ್ಲಿ ಇದೇ ಮೊದಲು ಕಾಂಗ್ರೆಸ್ ಗೆ ಈ ಸ್ಥಿತಿ ಬಂದಿದೆ. ಈಗಲಾದರೂ ನಾಯಕರು ಅರ್ಥ ಮಾಡಿಕೊಳ್ಳಬೇಕು. ಮೈತ್ರಿ ಬೇಕೆ, ಸಾಕೇ ಎಂದು ತೀರ್ಮಾನ ಮಾಡಬೇಕು. ಮೈತ್ರಿ ಹೀಗೆ ಮುಂದುವರಿದಲ್ಲಿ ಕಾಂಗ್ರೆಸ್ ಸರ್ವನಾಶವಾಗುವುದು ಖಂಡಿತ ಎಂದರು.
ಇನ್ನು ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಧಿಕಾರ ಬಂದಾಗ ತಗ್ಗಿ ಬಗ್ಗಿ ನಡೆಯಬೇಕು. ಅಧಿಕಾರ, ಅಂತಸ್ಥು, ಐಶ್ವರ್ಯ ಬಂದಾಗ ತಲೆಬಾಗಿ ನಡೆಯಬೇಕು. ಆಕಸ್ಮಿಕವಾಗಿ ಅಧಿಕಾರ ಸಿಕ್ಕಾಗ ಉಳಿಸಿಕೊಳ್ಳಬೇಕು. ಆದರೆ ಅಧಿಕಾರದಲ್ಲಿದ್ದಾಗ ತಲೆ ಎತ್ತಿ ನಡೆದಾಗ ಇಂತಹ ಸ್ಥಿತಿ ಬರುತ್ತದೆ ಎಂದರು.
ಇನ್ನು ಸುಮಲತಾ ಬೆಂಬಲದ ಬಗ್ಗೆಯೂ ಮಾತನಾಡಿದ ಸಿಎಂ ಲಿಂಗಪ್ಪ, ಮಂಡ್ಯದಲ್ಲಿದ್ದಿದ್ದರೆ ಸಯಮಲತಾಗೆ ಮತ ಹಾಕುತ್ತಿದ್ದೆ. ಅವರ ಗೆಲುವನ್ನು ನಾನು ಅಭಿನಂದಿಸುತ್ತೇನೆ ಎಂದರು.