ರಾಜ್ಯದಲ್ಲಿ ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಚಾಲನೆ ಸಿಗಲಿದೆ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಉಂಟಾದ ಭಿನ್ನಮತದ ಹಿನ್ನೆಲೆ ಈ ಹೇಳಿಕೆ ನೀಡಿದ್ದಾರೆ.  

ನಂಜನಗೂಡು/ ಶ್ರೀರಂಗಪಟ್ಟಣ : ರಾಜ್ಯದಲ್ಲಿ ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಚಾಲನೆ ಸಿಗಲಿದೆ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಭಾನುವಾರ ಲೇವಡಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ತಮ್ಮ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ನಿಮಿಷಾಂಬ ಹಾಗೂ ಶ್ರೀರಂಗನಾಥಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಮುಕ್ತ ಭಾರತ ಮಾಡಿದ್ದು, ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ಸಿಗರೇ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.

ನಂಜುಂಡೇಶ್ವರನಿಗೆ ಹೋಮ ಹವನ: ಕೆ.ಎಸ್‌. ಈಶ್ವರಪ್ಪ ಅವರು ನಂಜನಗೂಡಿನ ದತ್ತಾತ್ರೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಸಲ್ಲಿಸಿ ತಮ್ಮ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ದತ್ತಾತ್ರೇಯಸ್ವಾಮಿ ದೇವಾಲಯದಲ್ಲಿ 4 ಸಾವಿರ ಮಹಿಳಾ ಕಾರ್ಯಕರ್ತರೊಡನೆ ಗಣಪತಿ ಹೋಮ ಮತ್ತು ವಿವಿಧ ಪೂಜಾ ಕಾರ್ಯ ನೆರೆವೇರಿಸಿದರು. ನಂತರ ಶ್ರೀಕಂಠೇಶ್ವರ ದೇಗುಲ ಮುಂಭಾಗ ಕೇಕ್‌ ಕತ್ತರಿಸಿ ಸಂಭ್ರಮಿಸಿದರು.

ಕಾಂಗ್ರೆಸ್‌ ಪಕ್ಷವನ್ನು ಅಧ್ಯಕ್ಷರೇ ಮಾರಲು ಹೊರಟಿದ್ದಾರೆ ಎಂದು ಅದೇ ಪಕ್ಷದ ವಿಧಾನ ಪರಿಷತ್‌ ಸದಸ್ಯರೊಬ್ಬರು ಹೇಳಿದ್ದಾರೆ. ಇನ್ನು ಕೆಲ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಅವರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಕಾಂಗ್ರೆಸ್‌ಗೆ ಈ ಮಟ್ಟದಲ್ಲಿ ಅಪಮಾನವಾಗಿರಲಿಲ್ಲ. ಕಾಂಗ್ರೆಸ್‌ ದಲ್ಲಾಳಿಗಳ ದೊಡ್ಡ ಕೂಪವಾಗಿದೆ. ತಮಗಿಷ್ಟಬಂದವರಿಗೆ ಮಂತ್ರಿಗಿರಿ ಮತ್ತು ಖಾತೆಗಳನ್ನು ಹಂಚುತ್ತಿದ್ದು, ಅಧಿಕಾರಿಗಳ ದರ್ಬಾರ್‌ ಜೋರಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಈ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.