ಹಲವು ನಾಯಕರನ್ನು ಕೈ ಬಿಟ್ಟ ಕಾಂಗ್ರೆಸ್
ಕಾಂಗ್ರೆಸ್ ನ ಹಲವು ನಾಯಕರಿಗೆ ಕಾಂಗ್ರೆಸ್ ಇದೀಗ ಕೋಕ್ ನೀಡಿದೆ. ಸರಿಯಾಗಿ ಕಾರ್ಯ ನಿರ್ವಹಿಸಿದ ನಿಟ್ಟಿನಲ್ಲಿ ಸಿಡಬ್ಲು ಸಿ ಯಿಂದ ಕೋಕ್ ನೀಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ಥಾನ ನೀಡಲಾಗಿದೆ.
ನವದೆಹಲಿ : ಕೆಲವು ಹಳಬರನ್ನು ಹೊರಗೆ ಕಳಿಸಿ, ಹಲವು ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರಮುಖ ನೀತಿ ನಿರ್ಧಾರಕ ಸಮಿತಿಯಾದ ‘ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ’ಯನ್ನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪುನಾ ರಚಿಸಿದ್ದಾರೆ. ಇದೇ ವೇಳೆ ಜುಲೈ 22 ರಂದು ಹೊಸ ಸಮಿತಿಯ ಮೊದಲ ಸಭೆಯನ್ನು ಕರೆದಿದ್ದಾರೆ.
ಇತ್ತೀಚೆಗೆ ರಾಹುಲ್ರ ಅತ್ಯಾಪ್ತ ಬಳಗಕ್ಕೆ ಸೇರಿಕೊಂಡಿರುವ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (ಸಿಡಬ್ಲ್ಯುಸಿ) ಸ್ಥಾನ ಪಡೆದಿದ್ದಾರೆ.
ಇನ್ನುಳಿದಂತೆ ಕರ್ನಾಟಕದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಮಿತಿಯಲ್ಲಿ ಮುಂದುವರೆದಿದ್ದು, ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ. ಕರ್ನಾಟಕದ ಕಾಂಗ್ರೆಸ್ ಪ್ರಭಾರಿ ಕೆ.ಸಿ. ವೇಣುಗೋಪಾಲ್ ಅವರಿಗೂ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಸಮಿತಿಯಲ್ಲಿ 23 ಸದಸ್ಯರು, 19 ಕಾಯಂ ಆಹ್ವಾನಿತರು ಹಾಗೂ 9 ವಿಶೇಷ ಆಹ್ವಾನಿತರಿದ್ದಾರೆ.
ದಿಗ್ವಿಜಯ್ ಸೇರಿ ಹಲವರಿಗೆ ಕೊಕ್ : ಅಷ್ಟಾಗಿ ತೃಪ್ತಿಕರವಾಗಿ ಕಾರ್ಯನಿರ್ವಹಸದ ಆರೋಪ ಹೊತ್ತಿದ್ದ ದಿಗ್ವಿಜಯ ಸಿಂಗ್, ಜನಾರ್ದನ ದ್ವಿವೇದಿ, ಮೋಹನ್ ಪ್ರಕಾಶ್, ಸುಶೀಲ್ ಕುಮಾರ್ ಶಿಂದೆ, ಸಿ.ಪಿ. ಜೋಶಿ ಅವರನ್ನು ಕೈಬಿಡಲಾಗಿದೆ. ಮಧ್ಯಪ್ರದೇಶದಲ್ಲಿ ಸಿಎಂ ಸ್ಥಾನದ ರೇಸ್ನಲ್ಲಿರುವ ಕಮಲ್ನಾಥ್ರನ್ನೂ ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಗುಲಾಂ ನಬಿ ಆಜಾದ್, ಮೋತಿಲಾಲ್ ವೋರಾ, ಎ.ಕೆ. ಆ್ಯಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ ಅವರನ್ನು ಮುಂದುವರಿಸಲಾಗಿದೆ.