ಸರ್ಕಾರಿ ನೌಕರನಿಂದ ಬಿಜೆಪಿ ಪರ ಪ್ರಚಾರ
ಸರ್ಕಾರಿ ಸೇವೆಯಲ್ಲಿದ್ದ ವ್ಯಕ್ತಿಯೋರ್ವರು ಬಿಜೆಪಿ ಪರ ಪ್ರಚಾರಕ್ಕೆ ಇಳಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಈ ಘಟನೆ ನಡೆದಿದೆ.
ಚಿತ್ರದುರ್ಗ : ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸರ್ಕಾರಿ ನೌಕರಿನಿಗೆ ಜಿಲ್ಲಾಧಿಕಾರಿ ಶೋಕಾಸ್ ನಿಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಸರ್ಕಾರಿ ನೌಕರ ರಾಜೇಂದ್ರ ಚಕ್ರವರ್ತಿ ಎನ್ನುವ ವ್ಯಕ್ತಿ ವಿರುದ್ಧ ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
ಸರ್ಕಾರಿ ಪದವಿ ಕಾಲೇಜ್ ನ ಹಾಸ್ಟೆಲ್ ಸೂಪರವೈಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಜೇಂದ್ರ ಚಕ್ರವರ್ತಿ ಚಿತ್ರದುರ್ಗ ನಗರದ 33 ನೇ ವಾರ್ಡ್ ನಲ್ಲಿ ಶಾಸಕ ತಿಪ್ಪಾರೆಡ್ಡಿ ಜೊತೆ ಬಿಜೆಪಿ ಪರ ಬಹಿರಂಗ ಮತಯಾಚನೆ ಮಾಡುತ್ತಿದ್ದರು.
ಸರ್ಕಾರಿ ನೌಕರರು ಯಾವುದೇ ಪಕ್ಷ ಮತ್ತು ವ್ಯಕ್ತಿಯ ಪರ ಪ್ರಚಾರ ಮಾಡುವುದು ಕಾನೂನಾತ್ಮಕ ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ರಾಜೇಂದ್ರ ಚಕ್ರವರ್ತಿ ಬಿಜೆಪಿ ಪಕ್ಷದ ಪರ ಚುನಾವಣೆ ಪ್ರಚಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದರಿಂದ ಸಾರ್ವಜನಿಕರು ಚುನಾವಣಾ ಅಧಿಕಾರಿಗೆ ದೂರು ನೀಡಿದ್ದರು. ರಾಜೇಂದ್ರ ಚಕ್ರವರ್ತಿ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.