ಮಹತ್ವದ ಖಾತೆ ಪಡೆಯಲು ಸಚಿವರ ಹಿಂದೇಟು; ಸಿಎಂಗೆ ತಲೆನೋವಾದ 3 ಖಾತೆಗಳು
ಸಿದ್ದರಾಮಯ್ಯ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಸದ್ಯಕ್ಕೆ ಖಾಲಿ ಇವೆ. ಮಹದೇವ ಪ್ರಸಾದ್ ನಿಧನದಿಂದಾಗಿ ಒಂದು ಸ್ಥಾನ ತೆರವಾಗಿದ್ದರೆ, ಹೆಚ್ ವೈ ಮೇಟಿ ರಾಸಲೀಲೆ ಆರೋಪದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದರು. ಹೈಕಮಾಂಡ್ ಸೂಚನೆ ಮೇರೆಗೆ ಗೃಹ ಖಾತೆಗೆ ಪರಮೇಶ್ವರ್ ರಾಜೀನಾಮೆ ನೀಡಿದ್ದರು. ಈ ಮೂವರಿಂದ ತೆರವಾಗಿದ್ದ ಸ್ಥಾನಕ್ಕೆ ಯಾರನ್ನ ತರಬೇಕು ಅನ್ನೋದೇ ಸಿಎಂ ಸಿದ್ದರಾಮಯ್ಯಗೆ ದೊಡ್ಡ ತಲೆ ನೋವಾಗಿದೆ.
ಬೆಂಗಳೂರು (ಜೂ.27): ಸಿದ್ದರಾಮಯ್ಯ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಸದ್ಯಕ್ಕೆ ಖಾಲಿ ಇವೆ. ಮಹದೇವ ಪ್ರಸಾದ್ ನಿಧನದಿಂದಾಗಿ ಒಂದು ಸ್ಥಾನ ತೆರವಾಗಿದ್ದರೆ, ಹೆಚ್ ವೈ ಮೇಟಿ ರಾಸಲೀಲೆ ಆರೋಪದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದರು. ಹೈಕಮಾಂಡ್ ಸೂಚನೆ ಮೇರೆಗೆ ಗೃಹ ಖಾತೆಗೆ ಪರಮೇಶ್ವರ್ ರಾಜೀನಾಮೆ ನೀಡಿದ್ದರು. ಈ ಮೂವರಿಂದ ತೆರವಾಗಿದ್ದ ಸ್ಥಾನಕ್ಕೆ ಯಾರನ್ನ ತರಬೇಕು ಅನ್ನೋದೇ ಸಿಎಂ ಸಿದ್ದರಾಮಯ್ಯಗೆ ದೊಡ್ಡ ತಲೆ ನೋವಾಗಿದೆ.
ಇನ್ನು ಖಾಲಿ ಇರುವ ಸಹಕಾರ, ಅಬಕಾರಿ ಮತ್ತು ಗೃಹ ಖಾತೆಗಳು ಮಹತ್ವದ ಖಾತೆಗಳೇ ಆಗಿವೆ. ಈ ಹಿಂದೆ ಈ ಖಾತೆಗಳನ್ನು ನಿಭಾಯಿಸಿದವರೆಲ್ಲ ಹಿರಿಯರು ಮತ್ತು ಸಮರ್ಥರೇ ಆಗಿದ್ದಾರೆ. ಆದರೆ ಈ ಬಾರಿ ಸಮರ್ಥರಾರು ಸಿಗುತ್ತಿಲ್ಲ. ಅದರಲ್ಲೂ ಗೃಹ ಖಾತೆ ಬೇಡವೇ ಬೇಡ ಅಂತಾ ಕಡ್ಡಿ ಮುರಿದವರಂತೆ ಹಿರಿಯರು ಹೇಳುತ್ತಿದ್ದಾರೆ. ಇನ್ನೇನು ಚುನಾವಣೆ ವರ್ಷವಾದ್ದರಿಂದ ಸಮರ್ಥರಿಗೆ ಗೃಹ ಇಲಾಖೆ ಜವಾಬ್ದಾರಿ ನೀಡಬೇಕು ಅನ್ನೋದು ಸಿಎಂ ಅನಿಸಿಕೆ. ಆದ್ದರಿಂದ ಹಿರಿಯ ಸಚಿವರಾದ ರಮೇಶಕುಮಾರ್, ಆರ್ ವಿ ದೇಶಪಾಂಡೆ, ಹೆಚ್ ಸಿ ಮಹದೇವಪ್ಪ, ರಾಮಲಿಂಗಾರೆಡ್ಡಿ ಅವರನ್ನ ಸಿಎಂ ಗೃಹ ಇಲಾಖೆ ಹೊಣೆ ಹೊತ್ತುಕೊಳ್ಳುವಂತೆ ಕೇಳಿದ್ದಾರೆ. ಆದರೆ ಇವರೆಲ್ಲಾ ನಿರಾಕರಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೆಂಪಯ್ಯ. ಗೃಹ ಇಲಾಖೆಯಲ್ಲಿ ಕೆಂಪಯ್ಯ ಹೇಳಿದಂತೆ ಎಲ್ಲವೂ ನಡೆಯುತ್ತದೆ. ಹಾಗಾಗಿ ಇಲಾಖೆ ಹೊಣೆ ಹೊತ್ತು ಏನ್ಮಾಡೋದಿದೆ ಅನ್ನೋದು ಇವರ ವಾದ. ಕೆಂಪಯ್ಯರನ್ನ ಇಲಾಖೆಯಿಂದ ದೂರ ಇಡೋದಾದ್ರೆ ನಾವು ರೆಡಿ. ಇಲ್ಲವಾದಲ್ಲಿ ನಮ್ಮನ್ನ ನಮ್ಮ ಪಾಡಿಗೆ ಬಿಡಿ ಅನ್ನೋ ರೀತಿಯಲ್ಲಿ ಹಿರಿಯ ಸಚಿವರು ಸಿಎಂ ಸಿದ್ದರಾಮಯ್ಯಗೆ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೃಹ ಇಲಾಖೆ ಜವಾಬ್ದಾರಿ ಹೊರೋದಕ್ಕೆ ಕೆಂಪಯ್ಯ ಪ್ರಮುಖ ಅಡ್ಡಿಯಾಗಿದ್ದಾರೆ. ಸಿದ್ದರಾಮಯ್ಯ ಕೆಂಪಯ್ಯರನ್ನ ದೂರ ಇಡಲ್ಲ. ಸಮರ್ಥರು ಯಾರು ಆ ಇಲಾಖೆಯ ಜವಾಬ್ದಾರಿ ಹೊರಲ್ಲ. ಅಲ್ಲಿಗೆ ಹಗ್ಗವೂ ಹರಿಯಲ್ಲ. ಕೋಲು ಮುರಿಯಲ್ಲ ಅನ್ನೋ ಸ್ಥಿತಿ ಗೃಹ ಖಾತೆ ವಿಚಾರದಲ್ಲಿ ನಿರ್ಮಾಣವಾಗಿದೆ.