ಖಾಲಿ ಬುಟ್ಟಿಯಿಂದ ಪುಂಗಿ ಊದಿದರೆ ಹಾವು ಬರುತ್ತಾ? ಬಿಎಸ್'ವೈಗೆ ಸಿಎಂ ಟಾಂಗ್
ನಾವು ಭ್ರಷ್ಟಾಚಾರ ಮಾಡಿದ್ದೇವೆಂದು ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಸುಮ್ಮನೇ ಪುಂಗಿ ಊದುತ್ತಿದ್ದು ಅದನ್ನು ಸಾಬೀತುಪಡಿಸಲು ಅವರ ಬಳಿ ಯಾವ ದಾಖಲೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಜ.10): ನಾವು ಭ್ರಷ್ಟಾಚಾರ ಮಾಡಿದ್ದೇವೆಂದು ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಸುಮ್ಮನೇ ಪುಂಗಿ ಊದುತ್ತಿದ್ದು ಅದನ್ನು ಸಾಬೀತುಪಡಿಸಲು ಅವರ ಬಳಿ ಯಾವ ದಾಖಲೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಖಾಲಿ ಬುಟ್ಟಿಯಿಂದ ಪುಂಗಿ ಊದಿದರೆ ಹಾವು ಬರುತ್ತಾ ಎಂದು ಪ್ರಶ್ನಿಸಿದರು. ನಾವು ನುಡಿದಂತೆ ನಡೆಯುತ್ತಿದ್ದು ಹಗರಣ ಮುಕ್ತ ಸರ್ಕಾರ ನಮ್ಮದು. ವಿರೋಧ ಪಕ್ಷದವರು ಆರೋಪಗಳನ್ನು ಮಾಡಿದರೂ ಈ ರೀತಿ ಸುಳ್ಳು ಹೇಳಬಾರದು ಎಂದರು. ಮನುಷ್ಯತ್ವ ಇಲ್ಲದ ಹಿಂದುತ್ವ ಬಿಜೆಪಿಯಲ್ಲಿ ಮಾತ್ರವೇ ಇದೆ. ಮನುಷ್ಯ ಮನುಷ್ಯರಲ್ಲಿ ಬೆಂಕಿ ಹಾಕಿ ಕೋಮು ಜ್ವಾಲೆ ಹಾಕುವ ಬಿಜೆಪಿಗೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯವರು ಶವದ ಮೇಲೆ ರಾಜಕೀಯ ಮಾಡುವ ವರು. ಎಲ್ಲೇ ಯಾರಾದರೂ ಸತ್ತರೆ ಓಡುತ್ತಾರೆ. ರಣ ಹದ್ದುಗಳು ಬಂದಂತೆ. ಹಿಂದುತ್ವದ ಪಾಠವನ್ನು ಬಿಜೆಪಿ ಯಿಂದ ನಾವು ಕಲಿಬೇಕಿಲ್ಲ. ನಾವು ಹಿಂದುತ್ವವನ್ನು ಗುತ್ತಿಗೆಗೆ ಕೊಟ್ಟಿದ್ದೀವಾ? ಆದರೆ ಕಾಂಗ್ರೆಸ್ ಎಲ್ಲರನ್ನೂ ಪ್ರೀತಿಸುತ್ತದೆ, ಇದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದರು.