ಕರ್ನಾಟಕ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಲು ಸಜ್ಜಾಗಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ಆರ್‌ಆರ್‌ ಸಂಖ್ಯೆ ಪಡೆಯಲು ಪಾವತಿಸಬೇಕಿರುವ 10 ಸಾವಿರ ರು. ಶುಲ್ಕವನ್ನು ಕೈಬಿಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ವಿಧಾನಸಭೆ : ಕೃಷಿ ಪಂಪ್‌ಸೆಟ್‌ಗಳಿಗೆ ಆರ್‌ಆರ್‌ ಸಂಖ್ಯೆ ಪಡೆಯಲು ಪಾವತಿಸಬೇಕಿರುವ 10 ಸಾವಿರ ರು. ಶುಲ್ಕವನ್ನು ಕೈಬಿಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

Add Asianetnews Kannada as a Preferred SourcegooglePreferred

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ರಾಜೂಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ನೋಂದಣಿ ಪಡೆಯಬೇಕಾದರೆ 10 ಸಾವಿರ ರು. ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಏಕೆಂದರೆ, ಇಂತಹದೊಂದು ಸಂಪರ್ಕ ಕಲ್ಪಿಸಲು ವಿದ್ಯುತ್‌ ಕಂಪನಿಗಳಿಗೆ ಒಂದು ಲಕ್ಷ ರು. ವೆಚ್ಚವಾಗುತ್ತಿದ್ದು, ಅಷ್ಟುಮೊತ್ತವನ್ನು ರೈತರು ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ 10 ಸಾವಿರ ರು. ಮಾತ್ರ ಶುಲ್ಕ ವಿಧಿಸಲಾಗುತ್ತಿದೆ. ಈ ಮೊತ್ತವನ್ನು ಕೂಡ ಕೈಬಿಡಬೇಕು ಎಂದು ಶಾಸಕರ ಒತ್ತಾಯವಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಮಲೆನಾಡು ಭಾಗದ ಹಲವು ಶಾಸಕರು ತೀವ್ರ ಮಳೆಯಿಂದ ವಿದ್ಯುತ್‌ ಕಂಬಗಳು ಬೀಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಅರಣ್ಯ ಇಲಾಖೆಯು ಮರಗಳನ್ನು ಕಡಿಯಲು ಅವಕಾಶ ನೀಡದಿರುವುದೇ ಕಾರಣ. ಹೀಗಾಗಿ ಅರಣ್ಯ ಇಲಾಖೆ , ವಿದ್ಯುತ್‌ ಇಲಾಖೆ ಹಾಗೂ ಮಲೆನಾಡು ಭಾಗದ ಶಾಸಕರ ಸಭೆಯೊಂದನ್ನು ಕರೆದು ಸಮಸ್ಯೆ ಬಗ್ಗೆ ಕೂಲಂಕಷ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಕುಮಾರಸ್ವಾಮಿ ಒಪ್ಪಿದ್ದು, ಅಧಿವೇಶನದ ನಂತರ ಸಭೆ ಕರೆಯುವುದಾಗಿ ತಿಳಿಸಿದರು.