ಮಾತಿಗೆ ತಪ್ಪಿದ ಸಿಎಂ: ದುಂದುವೆಚ್ಚಕ್ಕೆ ತಾವೇ ಮುನ್ನುಡಿ ಬರೆದ ಕುಮಾರಸ್ವಾಮಿ
ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ತೀರ್ಮಾನಕ್ಕೆ ವಿರುದ್ಧವಾಗಿಯೇ ನಡೆದುಕೊಂಡಿದ್ದಾರೆ.ಏನಿದು ವಿಷ್ಯಾ ಅಂತೀರಾ. ಇಲ್ಲಿದೆ ನೋಡಿ ವಿವರ.
ಬೆಂಗಳೂರು, (ಅ.15): ಸರ್ಕಾರಿ ದುಂದು ವೆಚ್ಚ ಕಡಿವಾಣ ಹಾಕುವುದಾಗಿ ತೀರ್ಮಾನ ಮಾಡಿದ್ದ ಸಿಎಂ ಎಚ್.ಡಿ ಕುಮಾರಸ್ವಾಮಿ, ಇದೀಗ ತಮ್ಮ ತೀರ್ಮಾನಕ್ಕೆ ವಿರುದ್ಧವಾಗಿಯೇ ನಡೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ತಮ್ಮ ಸಚಿವಾಲಯಕ್ಕೆ ಸುಮಾರು 450ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ.
ಈ ಪೈಕಿ ಸುಮಾರು 250 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಉಳಿದಂತೆ ಬೇರೆ ಬೇರೆ ಇಲಾಖೆಯಿಂದಲೂ
ನಿಯೋಜನೆ ಮೇಲೆ ಬಂದಿರುವ ಅಧಿಕಾರಿ ಮತ್ತು ನೌಕರರು ಮುಖ್ಯಮಂತ್ರಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಬಿ.ಎಸ್.ಗೌಡ ಅವರು ಸಲ್ಲಿಸಿದ್ದ ಅರ್ಜಿಗೆ ನೀಡಿದ ವಿವರದಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ಅವರ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವವರ ಪೈಕಿ ವಿಶೇಷ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಸೇರಿದ್ದಾರೆ.
ಜನತಾದರ್ಶನ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ ಸೇರಿದಂತೆ ಸುಮಾರು 450ರಷ್ಟು ವಿವಿಧ ವರ್ಗದ ಅಧಿಕಾರಿಗಳು ಮುಖ್ಯಮಂತ್ರಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಹಿಂದೆಂದೂ ಇಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಿದ ಉದಾಹರಣೆ ಇಲ್ಲ ಎನ್ನಲಾಗಿದೆ. ಸಿಎಂಗೆ 450 ಸಿಬ್ಬಂದಿ ನೇಮಿಸಿಕೊಳ್ಳುವ ಅವತ್ಯವೇನಿತ್ತು ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.