ಹಿಂದೂ ಧರ್ಮ ಸಂಸದ್'ನಲ್ಲಿ ಕ್ರೈಸ್ತ - ಮುಸ್ಲಿಂ ಬಂಧುಗಳ ಸೇವೆ
ಭಾನುವಾರ ಸಂಜೆ ನಗರದ ಜೋಡುಕಟ್ಟೆಯಿಂದ ಸಾಧುಸಂತರ ಮತ್ತು ಹತ್ತಿಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದ ಭಾರಿ ಮೆರವಣಿಗೆಯ ಸಂದರ್ಭದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಗೆಳೆಯರಾದ ಮೊಹಮ್ಮದ್ ಅರೀಫ್, ಮಹಮ್ಮದ್ ಅನ್ಸಾರ್, ಮನ್ಸೂರ್, ಜಾನ್ ಮತ್ತು ಸೋಜನ್ ಅವರು ಸುಮಾರು 15 ಸಾವಿರಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರಿಗೆ ಉಚಿತವಾಗಿ ತಂಪು ಶರಬತ್ತು ವಿತರಿಸಿ ಮೆರವಣಿಗೆಗೆ ಇನ್ನಷ್ಟು ಉತ್ಸಾಹ ತುಂಬಿದರು.
ಉಡುಪಿ(ನ.27): ಹಿಂದೂ ಧರ್ಮ ಸಂಸದ್'ನಲ್ಲಿ ಕ್ರೈಸ್ತ - ಮುಸ್ಲಿಂ ಬಂಧುಗಳ ಸೇವೆ ಉಡುಪಿಯಲ್ಲಿ ಭಾನುವಾರ ನಡೆದ ಹಿಂದೂ ಧರ್ಮ ಸಂಸದ್ ಮತ್ತು ಹಿಂದೂ ಸಮಾಜೋತ್ಸವದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಬಂಧುಗಳು ಸಕ್ರಿಯವಾಗಿ ಭಾಗವಹಿಸಿ ಸಾಮರಸ್ಯ ಮೆರೆದರು. ಭಾನುವಾರ ಸಂಜೆ ನಗರದ ಜೋಡುಕಟ್ಟೆಯಿಂದ ಸಾಧುಸಂತರ ಮತ್ತು ಹತ್ತಿಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದ ಭಾರಿ ಮೆರವಣಿಗೆಯ ಸಂದರ್ಭದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಗೆಳೆಯರಾದ ಮೊಹಮ್ಮದ್ ಅರೀಫ್, ಮಹಮ್ಮದ್ ಅನ್ಸಾರ್, ಮನ್ಸೂರ್, ಜಾನ್ ಮತ್ತು ಸೋಜನ್ ಅವರು ಸುಮಾರು 15 ಸಾವಿರಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರಿಗೆ ಉಚಿತವಾಗಿ ತಂಪು ಶರಬತ್ತು ವಿತರಿಸಿ ಮೆರವಣಿಗೆಗೆ ಇನ್ನಷ್ಟು ಉತ್ಸಾಹ ತುಂಬಿದರು.
ಆರೀಫ್ ಪೇಜಾವರ ಶ್ರೀಗಳ ಅಭಿಮಾನಿಯಾಗಿದ್ದು, 2 ವರ್ಷಗಳ ಹಿಂದೆ ಅವರ ಪರ್ಯಾಯೋತ್ಸವದ ಭಾರೀ ಮೆರವಣಿಗೆಯ ಸಂದರ್ಭದಲ್ಲಿಯೂ ಇದೇ ರೀತಿ ಶರಬತ್ತು ವಿತರಿಸಿದ್ದರು. ಅಲ್ಲದೆ ಪೇಜಾವರ ಶ್ರೀಗಳ ಹೆಸರಿನಲ್ಲಿ ಈ ಹಿಂದೆ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಧರ್ಮಸಂಸದ್ ನಲ್ಲಿ ಮಣಿಪಾಲದ ಆಲ್ವಿನ್ ಡಿಸೋಜ ಎಂಬ ಕ್ರಿಶ್ಚಿಯನ್ ಯುವಕ ಸ್ಪಯಂಸೇವಕನಾಗಿ ಸೇವೆ ಸಲ್ಲಿಸಿದ್ದಾರೆ.
ಊಟ ಬಡಿಸುವುದು, ತಟ್ಟೆ ತೆಗೆಯುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದ ಆಲ್ವಿನ್, ಕ್ರೈಸ್ತರ ಸಮಾರಂಭಗಳಲ್ಲಿ ಹಿಂದೂ ಕಾರ್ಯಕರ್ತರು ಸಹಾಯ ಮಾಡುವುದನ್ನು ನೋಡಿದ್ದೇನೆ. ಆದ್ದರಿಂದ ಹಿಂದೂಗಳ ಸಮಾರಂಭದಲ್ಲಿ ನಾನು ಕೆಲಸ ಮಾಡುವುದಕ್ಕೆ ಪ್ರೇರಣೆಯಾಯಿತು ಹಿಂದೂ ಸಮಾಜೋತ್ಸವದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಬಂಧುಗಳು ಪಾನೀಯ ವಿತರಿಸಿದರು ಎಂದಿದ್ದಾರೆ.