- 3000 ಟಿಎಂಸಿ ಸಮುದ್ರ ಸೇರುತ್ತಿದೆ. - ಕರ್ನಾಟಕ-ತ.ನಾಡು 40 ಟಿಎಂಸಿಗಾಗಿ ಕಿತ್ತಾಡುತ್ತಿವೆ- ಕೃಷ್ಣಾ, ಪಿನಾಕಿನಿಗೆ ಹರಿಸಿ ಕಾವೇರಿಗೆ ಗೋದಾವರಿ ನೀರು: ನಿತಿನ್ ಗಡ್ಕರಿ -ದೇಶದಲ್ಲಿ ಒಟ್ಟು 30 ನದಿ ಜೋಡಣೆ ಯೋಜನೆಗಳನ್ನು ಕೇಂದ್ರ ಸರ್ಕಾರ ಯೋಜಿಸಿದೆ

ನವದೆಹಲಿ (ಆ. 08): ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಗೋದಾವರಿ- ಕಾವೇರಿ ಸೇರಿದಂತೆ ದೇಶದ ಐದು ನದಿ ಜೋಡಣೆಗಳ ಕಾಮಗಾರಿ ಆರಂಭಿಸಲು ಪ್ರಯತ್ನ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

Add Asianetnews Kannada as a Preferred SourcegooglePreferred

ಗೋದಾವರಿಯನ್ನು ಕಾವೇರಿ ಜತೆ ಜೋಡಣೆ ಮಾಡುವುದರಿಂದ ಕರ್ನಾಟಕಕ್ಕೆ ಹೆಚ್ಚಿನ ಉಪಯೋಗ ಇಲ್ಲದಿದ್ದರೂ, ಶತಮಾನದಿಂದ ಇರುವ ಕಾವೇರಿ ವಿವಾದಕ್ಕೆ ತೆರೆ ಬೀಳಬಹುದು ಎಂಬ ನಿರೀಕ್ಷೆ ಇದೆ.

ದೇಶದಲ್ಲಿ ಒಟ್ಟು 30 ನದಿ ಜೋಡಣೆ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಆ ಪೈಕಿ ಗೋದಾವರಿ- ಕಾವೇರಿ, ಕೆನ್-ಬೆತ್ವಾ, ದಮನ್ ಗಂಗಾ- ಪಿಂಜಲ್, ತಾಪಿ- ನರ್ಮದಾ ಸೇರಿ 5 ಯೋಜನೆಗಳು ಮುಂಚೂಣಿಯಲ್ಲಿವೆ.

2 ಲಕ್ಷ ಕೋಟಿ ರು. ವೆಚ್ಚದ ಯೋಜನೆಗಳು ಇವಾಗಿದ್ದು, ವಿಶ್ವ ಬ್ಯಾಂಕ್ ಹಾಗೂ ಎಡಿಬಿಯಿಂದ ಹಣಕಾಸು ಸಹಾಯ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಈ ಯೋಜನೆಗಳನ್ನು ಆರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಜಲಸಂಪನ್ಮೂಲ, ನದಿ ಅಭಿವೃದ್ಧಿ, ಗಂಗಾ ಪುನರುಜ್ಜೀವನ ಖಾತೆ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಸೋಮವಾರ ತಿಳಿಸಿದ್ದಾರೆ.

ಗೋದಾವರಿ- ಕಾವೇರಿ ಜೋಡಣೆಯ ಯೋಜನೆಯಡಿ ಗೋದಾವರಿ ನದಿಗೆ 60 ಸಾವಿರ ಕೋಟಿ ರು. ಅಂದಾಜು ವೆಚ್ಚದಲ್ಲಿ ಕೊಲಾವರಂ ಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಹಿನ್ನೀರನ್ನು ಕೃಷ್ಣಾ ನದಿ, ಪೆನ್ನಾರ್ (ಪಿನಾಕಿನಿ) ನದಿಗಳ ಮೂಲಕ ಕಾವೇರಿಗೆ ನದಿಗೆ ಹರಿಸಲಾಗುತ್ತಿದೆ. 3000 ಟಿಎಂಸಿಯಷ್ಟು ಅಗಾಧ ನೀರು ಸಮುದ್ರ ಸೇರುತ್ತಿರುವಾಗ ಕರ್ನಾಟಕ ಹಾಗೂ ತಮಿಳುನಾಡುಗಳು ಕೇವಲ 40 ಟಿಎಂಸಿಗೆ ಜಗಳವಾಡುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಮಹತ್ವದ್ದಾಗಿದೆ ಎಂದು ಗಡ್ಕರಿ ವಿವರಿಸಿದರು.